ಕಡಿಯಾಳಿ ಅಂಗನವಾಡಿ, ಸ್ಟೇಟ್ಹೋಮ್ಗೆ ಸಚಿವೆ ಜಯಮಾಲ ಭೇಟಿ
ಮಕ್ಕಳಿಗೆ ಸಮರ್ಪಕ ಪೌಷ್ಠಿಕ ಆಹಾರ ನೀಡಲು ಸೂಚನೆ
ಉಡುಪಿ, ಆ.16: ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯ ಪ್ರವಾಸದ ಲ್ಲಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರು ಇಂದು ಕಡಿಯಾಳಿಯ ಒಂದು ಅಂಗನವಾಡಿ ಹಾಗೂ ನಿಟ್ಟೂರಿನಲ್ಲಿರುವ ಮಹಿಳಾ ನಿಲಯ (ಸ್ಟೇಟ್ ಹೋಮ್)ಗಳಿಗೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆ ಹಾಗೂ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಬೆಳಗ್ಗೆ ಮೊದಲು ಉಡುಪಿ ಶಿಶು ಅಭಿವೃದ್ದಿ ಯೋಜನೆಯ ಕಡಿಯಾಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡಿದರು. ಸರಕಾರದಿಂದ ಮಕ್ಕಳಿಗೆ ಪೂರಕೈಯಾಗುವ ಎಲ್ಲಾ ಪೌಷ್ಠಿಕ ಆಹಾರಗಳು ಸಮರ್ಪಕವಾಗಿ ಮಕ್ಕಳಿಗೆ ಸಿಗುತ್ತಿರುವುದನ್ನು ವಿಚಾರಿಸಿ ಖಾತ್ರಿ ಪಡಿಸಿಕೊಂಡರು.
ಅಂಗನವಾಡಿಗೆ ದಾಖಲಾದ ಎಲ್ಲಾ 13 ಮಕ್ಕಳು ಹಾಜರಿರುವುದನ್ನು, ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹಾಜರಿಯನ್ನು ಪರಿಶೀಲಿಸಿದರು. ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸಲಾಗುವ ಪೌಷ್ಟಿಕ ಆಹಾರವಾದ ಮೊಳಕೆ ಬರಿಸಿದ ಹೆಸರುಕಾಳು ಹಾಗೂ ಕೆನೆಭರಿತ ಹಾಲನ್ನು ಖುದ್ದಾಗಿ ಸೇವಿಸಿ ಅದರ ಗುಣಮಟ್ಟ ಹಾಗೂ ರುಚಿಯನ್ನು ಪರಿಶೀಲಿಸಿದರು. ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿರುವ ಇಂಟರ್ಲಾಕ್ ವ್ಯವಸ್ಥೆ ಮಾಡಿಸುವಂತೆ ಸೂಚಿಸಿದ ಸಚಿವೆ, ಶಿಶು ಸ್ನೇಹಿ ಶೌಚಾಲಯದ ಅಗತ್ಯತೆ ಹಾಗೂ ಕೇಂದ್ರದ ಎದುರಿನ ಜಾಗದ ವಿಸ್ತರಣೆಯ ಅಗತ್ಯವನ್ನು ಮನದಟ್ಟು ಮಾಡಿಕೊಂಡು ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಬಳಿಕ ಅಲ್ಲಿಂದ ನಿಟ್ಟೂರಿನ ಕೊಡಂಕೂರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಎಲ್ಲಾ 9 ಮಕ್ಕಳು, ಕಾರ್ಯಕರ್ತೆ ಹಾಗೂ ಸಹಾಯಕಿ ಹಾಜರಿರುವುದನ್ನು ಖಾತ್ರಿ ಪಡಿಸಿಕೊಂಡರು. ಮಕ್ಕಳಿಗೆ ಹೊರಾಂಗಣ ಆಟದ ವ್ಯವಸ್ಥೆ, ನೀರು ಶೇಖರಣೆಗೆ ಸಿಂಟೆಕ್ಸ್ನ ಅವಶ್ಯಕತೆಯನ್ನು ಮನಗಂಡು ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು. ಈ ವೇಳೆ ಉಪಸ್ಥಿತರಿದ್ದ ಸ್ಥಳೀಯರ ಬಳಿ ಅಂಗನವಾಡಿ ಕೇಂದ್ರದ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರ ನೀಡುವಂತೆ ತಿಳಿಸಿದರು.
ಅಲ್ಲಿಂದ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿದ ಸಚಿವೆ, ನಿಲಯದಲ್ಲಿದ್ದ 61 ಮಂದಿ ಮಹಿಳೆಯರು ಹಾಗೂ ಬಾಲಕಿಯರನ್ನು ಮಾತನಾಡಿಸಿದರು. ಅಲ್ಲಿನ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಅಗತ್ಯ ಮಾಹಿತಿಗಳನ್ನು ಪಡೆದರು.
ರಾಜ್ಯ ಮಹಿಳಾ ನಿಲಯದಲ್ಲಿದ್ದ ಎಲ್ಲರನ್ನು ಮಾತನಾಡಿಸಿ ಅವರ ಕೌಟುಂಬಿಕ ಹಿನ್ನೆಲೆ, ಅವರಿಗಿರಬಹುದಾದ ಸಮಸ್ಯೆಗಳನ್ನು ವೌನವಾಗಿ ಆಲಿಸಿದರು ಹಾಗೂ ಅವರಿಗೆ ಧೈರ್ಯವನ್ನು ತುಂಬಲು ಪ್ರಯತ್ನಿಸಿದರು. ಸ್ಟೇಟ್ಹೋಮ್ನ ನಿವಾಸಿಗರಿಗಾಗಿ ಇರುವ ಹುಣಿಸೆಹಣ್ಣು ಸಂಸ್ಕರಣಾ ಘಟಕ, ಅಗರ ಬತ್ತಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾವೆಲ್ಲರೂ ಇಲ್ಲಿ ತೋಟಗಾರಿಕೆ, ಲೈಬ್ರರಿ, ಹೊರಾಂಗಣ ಚಟುವಟಿಕೆ, ಆರೋಗ್ಯಕ್ಕಾಗಿ ಪ್ರಾಣಯಾಮ ಮುಂತಾದ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಇಲ್ಲಿರುವವ ರೊಂದಿಗೆ ಪ್ರೀತಿಯಿಂದ ವ್ಯವಹರಿಸಲು ಸಿಬ್ಬಂದಿಗಳಿಗೆ ಕರೆ ನೀಡಿದರು. ತಾವೆಲ್ಲರೂ ಇಲ್ಲಿ ತೋಟಗಾರಿಕೆ, ಲೈಬ್ರರಿ, ಹೊರಾಂಗಣ ಚಟುವಟಿಕೆ, ಆರೋಗ್ಯಕ್ಕಾಗಿ ಪ್ರಾಣಯಾಮ ಮುಂತಾದ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಇಲ್ಲಿರುವವ ರೊಂದಿಗೆ ಪ್ರೀತಿಯಿಂದ ವ್ಯವಹರಿಸಲು ಸಿಬ್ಬಂದಿಗಳಿಗೆ ಕರೆ ನೀಡಿದರು. ಸಚಿವರ ಭೇಟಿಯ ವೇಳೆ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವೆ ಜಯಮಾಲ ಅವರು ಬುಧವಾರ ಸಂಜೆ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.