ಕಳವು ಪ್ರಕರಣ: ಆರೋಪಿ ಬಂಧನ
ಮಂಗಳೂರು, ಆ.16: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕುಡುಂಬೂರು ಬಳಿಯಿರುವ ಮೊಬೈಲ್ ಮತ್ತು ದಿನಸಿ ಅಂಗಡಿಗಳ ಬೀಗ ಮುರಿದು ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಲಕ್ಕೀಪುರ್ ನಿವಾಸಿ ಪಾರುಲ್ ಹುಸೈನ್ (19) ಆರೋಪಿ.
ಈತ ಕುಡುಂಬೂರು ಬಳಿಯಿರುವ ಪೂಜಾ ಮೊಬೈಲ್ ಅಂಗಡಿ ಮತ್ತು ದಿನಸಿ ಸಾಮಾನು ಅಂಗಡಿಯ ಬೀಗವನ್ನು ಮುರಿದು ಒಳ ಪ್ರವೇಶಿಸಿ ಮೊಬೈಲ್, ಸಿಸಿಟಿವಿ ಡಿ.ವಿ.ಆರ್. ಮತ್ತು ಇತರ ಸೊತ್ತುಗಳನ್ನು ಕಳ್ಳತನ ಮಾಡಿದ್ದ. ಆರೋಪಿ ಸ್ಥಳೀಯ ಗ್ಯಾರೇಜ್ವೊಂದರಲ್ಲಿ ಮೆಕಾನಿಕ್ ಆಗಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆರೋಪಿಯಿಂದ ಜಿಯೋ ಕಂಪೆನಿಯ ಮೊಬೈಲ್ 2, ಬ್ಲೂಟೂತ್ 1 ಮತ್ತು ಬೈಕ್ ಸೇರಿದಂತೆ ಒಟ್ಟು 64,300 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ 3-4ಮಂದಿ ಶಾಮೀಲಾಗಿದ್ದು, ಅವರಿಗೆ ಶೋಧ ನಡೆಯುತ್ತಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ರಾಜೇಂದ್ರ ಡಿ.ಎಸ್. ನಿರ್ದೇಶ ಮೇರೆಗೆ ರೌಡಿ ನಿಗ್ರಹದಳದ ನಿರೀಕ್ಷಕರು ಮತ್ತು ಪಣಂಬೂರು ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.