ಮಂಗಳೂರು ರೈಲು ನಿಲ್ದಾಣವನ್ನು ಸಂಪರ್ಕಿಸುವ ಐದು ರೈಲುಗಳ ಯಾನ ರದ್ದು
ಮಂಗಳೂರು, ಆ.17: ಕರ್ನಾಟಕ, ಕೇರಳದಲ್ಲಿ ಭಾರೀ ಮಳೆ, ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಐದು ರೈಲುಗಳ ಯಾನ ರದ್ದಾಗಿವೆ. ಇದಲ್ಲದೆ ಇನ್ನೂ ಕೆಲವು ರೈಲುಗಳ ಸಂಚಾರ ಶುಕ್ರವಾರ ಭಾಗಶಃ ರದ್ದುಗೊಳ್ಳುವ ಸಾಧ್ಯತೆಯಿದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ.
ಮಂಗಳೂರು-ಚೆನ್ನೈ ಎಗ್ಮೋರೆ ಎಕ್ಸ್ ಪ್ರೆಸ್ ರೈಲಿನ (ಟ್ರೈನ್ ನಂ. 16860) ಇಂದಿನ ಯಾನ ಸಂಪೂರ್ಣ ರದ್ದಾಗಿದೆ. ಅದೇರೀತಿ ಮಂಗಳೂರು ಸೆಂಟ್ರಲ್ -ನಾಗರಕೊಯ್ಲ್ ಜಂಕ್ಷನ್ ನಡುವೆ ಸಂಚರಿಸಬೇಕಿದ್ದ ಎರ್ನಾಡ್ ಎಕ್ಸ್ ಪ್ರೆಸ್ ಟ್ರೈನ್(16605), ಮಂಗಳೂರು- ನಾಗರಕೊಯ್ಲ್ ಎಕ್ಸ್ ಪ್ರೆಸ್ ಟ್ರೈನ್(16649), ಮಂಗಳೂರಿನಿಂದ ಕೊಯಂಬತ್ತೂರ್ ನಡುವಿನ ಎಕ್ಸ್ ಪ್ರೆಸ್ ಟ್ರೈನ್(22609), ಕಣ್ಣೂರು- ತಿರುವನಂತಪುರಂ ಜನ ಶತಾಬ್ದಿ ಎಕ್ಸ್ ಪ್ರೆಸ್ ರೈಲು (12081) ಹಾಗೂ ಕಣ್ಣೂರು-ಅಲೆಪಿ ಎಕ್ಸ್ ಪ್ರೆಸ್ ರೈಲು (16308) ಯಾನವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.
# ಭಾಗಶಃ ರದ್ದು
ಹಝ್ರತ್ ನಿಝಾಮುದ್ದೀನ್-ತಿರುವನಂತಪುರಂ ರಾಜಧಾನಿ ಎಕ್ಸ್ ಪ್ರೆಸ್ ರೈಲು (12432) ಆ.14ರಂದು ದಿಲ್ಲಿಯ ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣದಿಂದ ಯಾನ ಆರಂಭಿಸಿದ್ದು, ಕೋಝಿಕ್ಕೋಡ್ ವರೆಗೆ ಮಾತ್ರ ಸಂಚರಿಸುವ ಸಾಧ್ಯತೆ ಇದೆ. ಅದೇರೀತಿ ನಿಝಾಮುದ್ದೀನ್-ಎರ್ನಾಕುಲಂ ಎಕ್ಸ್ ಪ್ರೆಸ್ ಟ್ರೈನ್ (12618) ಕೋಝಿಕ್ಕೋಡ್ ವರೆಗೆ ಸಂಚರಿಸಿ ಮುಂದಿನ ಸಂಚಾರ ಭಾಗಶಃ ರದ್ದಾಗುವ ಸಾಧ್ಯತೆ ಇದೆ.
ಲೋಕಮಾನ್ಯ ತಿಲಕ್ ಟರ್ಮಿನಸ್ - ತಿರುವನಂತಪುರಂ ನೇತ್ರಾವತಿ ಎಕ್ಸ್ ಪ್ರೆಸ್ ರೈಲು(16545) ಸಂಚಾರ ಕೂಡಾ ಕೋಝಿಕ್ಕೋಡ್ ನಲ್ಲಿ ಭಾಗಶಃ ರದ್ದಾಗುವ ಸಾಧ್ಯತೆ ಇದೆ ಎಂದು ಪ್ರಕಟನೆ ತಿಳಿಸಿದೆ.