ಚಾರ್ಮಾಡಿಘಾಟಿಯಲ್ಲಿ ಘನ ವಾಹನಗಳಿಂದ ಸಮಸ್ಯೆ
ಬೆಳ್ತಂಗಡಿ, ಆ. 17: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಟೆನ್ ವೀಲ್ ಲಾರಿಯೊಂದು ಬಾಕಿಯಾಗಿ ವಾಹನ ಸಂಚಾರಕ್ಕೆ ತಡೆಯಾಗಿದ್ದು ಟ್ರಾಫಿಕ್ ಸಮಸ್ಯೆ ತಲೆದೋರಿದೆ.
ಅಣ್ಣಪ್ಪ ಬೆಟ್ಟದಿಂದ ಕೆಳಗೆ ಹಿಮ್ಮುರಿ ತಿರುವಿವೊಂದರಲ್ಲಿ ಟೆನ್ ವೀಲ್ ಲಾರಿ ಬಾಕಿಯಾಗಿದ್ದು ಟ್ರಾಫಿಕ್ಜಾಮ್ ಆಗಿದೆ. ತಿರುವಿನಲ್ಲಿ ಸಂಚರಿಸುತ್ತಿದ್ದ ಲಾರಿ ರಸ್ತೆಯಲ್ಲಿ ಹದಗೆಟ್ಟಿದ್ದರಿಂದ ಮೇಲೆ ಹೋಗಲು ಸಾಧ್ಯವಾಗದೆ ನಿಂತಿದೆ.
ತಡೆಗೋಡೆ ಕುಸಿತವಾಗಿದ್ದು, ಚಾಲಕ ಸ್ವಲ್ಪ ನಿರ್ಲಕ್ಷ್ಯ ವಹಿಸಿ ಹಿಂದಕ್ಕೆ ಚಲಾಯಿಸಿದರೆ ಪ್ರಪಾತಕ್ಕೆ ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮಳೆಯಿಂದ 5 ಮತ್ತು 6ನೇ ತಿರುವಿನಲ್ಲಿ ರಸ್ತೆಯ ಕೆಳ ಭಾಗ ಕುಸಿತವಾಗಿದೆ. ಘನ ವಾಹನಗಳ ಸಂಚಾರ ಅಧಿಕವಾಗಿದ್ದು, ಲಘು ವಾಹನಗಳಿಗೆ ಮುಕ್ತ ಸಂಚಾರಕ್ಕೆ ತಡೆಯಾಗುತ್ತಿದೆ.
ಮಳೆಯಿಂದ ಈಗಾಗಲೇ ಅಲ್ಲಲ್ಲಿ ಕುಸಿತವಾಗಿದ್ದು, ಹಿಮ್ಮುರಿ ತಿರುವುಗಳಲ್ಲಿ ಸೃಷ್ಟಿ ಯಾದ ಹೊಂಡಗಳಿಂದ ಘನ ವಾಹನಗಳಿಗೆ ಸಂಚರಿಸಲು ಸಾಧ್ಯ ವಾಗದೇ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತದೆ.
ಸಂಪಾಜೆ ಮತ್ತು ಶಿರಾಡಿ ಘಾಟ್ರಸ್ತೆ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲಾ ಘನ ವಾಹನಗಳು ಚಾರ್ಮಾಡಿಯಾಗಿ ಹೋಗುತ್ತಿದೆ. ಇದರಿಂದ ಇತರ ವಾಹನಗಳಿಗೆ ಸಮಸ್ಯೆ ಉಂಟಾಗಿದೆ. ಕೆ ಎಸ್ಆರ್ ಟಿ ಸಿಯ ಸಾಮಾನ್ಯ ಬಸ್ ಗಳು ಮಾತ್ರ ಚಾರ್ಮಾಡಿಯಾಗಿ ಸಂಚರಿಸುವಂತೆ ಆದೇಶ ನೀಡಲಾಗಿದೆ. ಉಳಿದಂತೆ ರಾಜಹಂಸ, ವೋಲ್ವೋ ಬಸ್ ಗಳು ಎಸ್.ಕೆ. ಬಾರ್ಡರ್ ಮೂಲಕ ತೆರಳುವಂತೆ ಸೂಚಿಸಲಾಗಿದೆ.
ಆದರೆ ಖಾಸಗಿ ಬಸ್ಗಳು ಹಾಗೂ ಸರಕುಗಳನ್ನು ಹೊತ್ತೊಯ್ಯುವ ಘನ ವಾಹನಗಳು ಯಾವುದೇ ನಿರ್ಬಂಧ ಇಲ್ಲದೆ ಸಂಚರಿಸುತ್ತಿದೆ. ಘನ ವಾಹನಗಳ ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮೌನಕ್ಕೆ ಶರಣಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಾಯಕಾರಿಯಾಗಿರುವ, ಅಲ್ಲಲ್ಲಿ ಕುಸಿತವಾಗಿರುವ ಘಾಟ್ ರಸ್ತೆಯಲ್ಲಿ ತನ್ನ ಸಾಮರ್ಥ್ಯಕ್ಕಿಂತ ಅಧಿಕವಾಗಿ ಸಂಚರಿಸುವ ಘನ ವಾಹನಗಳು ಹಾಗೂ ಪ್ರಯಾಣಿಕರನ್ನು ಕೊಂಡೊಯ್ಯುವ ಬಸ್ ಗಳ ಬಗ್ಗೆ ಮುಂಜಾಗ್ರತಾಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈಗಾಗಲೇ ಜಿಲ್ಲೆಯನ್ನು ಸಂಪರ್ಕಿಸುವ ಎರಡು ಘಾಟ್ ರಸ್ತೆ ಸ್ಥಗಿತವಾಗಿದ್ದು ಉಳಿದ ಏಕೈಕ ಚಾರ್ಮಾಡಿ ಘಾಟ್ ರಸ್ತೆಯನ್ನು ಉಳಿಸಬೇಕಾದರೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಚಾರ್ಮಾಡಿಯ ಸ್ಥಳೀಯ ಯುವಕರು ಹಾಗೂ ಎಸ್ಕೆಎಸ್ಎಸ್ಎಫ್ ಸಂಘಟನೆಯವರು ಚಾರ್ಮಾಡಿ ಘಾಟಿಯಲ್ಲಿ ರಾತ್ರಿಯಿಡೀ ಇದ್ದು ಪ್ರಯಾಣಿಕರಿಗೆ ನೆರವಾಗುತ್ತಿದ್ದಾರೆ.