ಸರ್ವಧರ್ಮ ಸಮನ್ವಯತೆಯೇ ಭಾರತದ ದೊಡ್ಡ ಶಕ್ತಿ: ಮೋಹನ್ರಾಜ್
ಉಡುಪಿ, ಆ.17: ದೇಶದಲ್ಲಿ ಅನೇಕ ಸಂಸ್ಕೃತಿ, ಅನೇಕ ಭಾಷೆ, ಅನೇಕ ಧರ್ಮ ಆಚಾರ ವಿಚಾರಗಳು ಇದ್ದರೂ ಕೂಡ ಭಾರತ ದೇಶ ಇಂದು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಗಿ ಮೂಡಿ ಬಂದಿದೆ. ಅದಕ್ಕೆ ಇಲ್ಲಿ ಇರುವ ಸರ್ವ ಧರ್ಮ ಸಮನ್ವಯತೆಯೇ ಕಾರಣ. ದೇಶದಲ್ಲಿ ಸೌಹಾರ್ದತೆ ಉಳಿದರೆ ಮಾತ್ರ ದೇಶದ ಸ್ವಾತಂತ್ರ್ಯ ಉಳಿಯಬಹುದು ಎಂದು ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್ರಾಜ್ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ 72ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಪ್ಸಾ ಆಡಿಟೋರಿಯಂನಲ್ಲಿ ಇತ್ತೀಚೆಗೆ ಜರಗಿದ ಯು.ಪಧ್ಮನಾಭ ಶೆಟ್ಟಿಗಾರ್, ಕೆ.ಸದಾನಂದ ಕಾಂಚನ್, ಟಿ.ವೈ.ಶಾಬುದ್ದೀನ್ ಮತ್ತು ಐರಿನ್ ಮಿನೇಜಸ್ ಸ್ಮಾರಕ ವಿದ್ಯಾರ್ಥಿ ವೇತನ, ಮಂಜುನಾಥ ಉದ್ಯಾವರ ಸ್ಮಾರಕ ವೈದ್ಯಕೀಯ ನೆರವು ಮತ್ತು ಅಬ್ದುಲ್ ಜಲೀಲ್ ಸಾಹೇಬರ ಪ್ರಾಯೋಜಕತ್ವದ ಉಚಿತ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಸ್ಕೌಟ್ ಗೈಡ್ಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಅಬ್ದುಲ್ ಜಲೀಲ್ ಸಾಹೇಬ್ ವಹಿಸಿದ್ದರು.
ಈ ಸಂದರ್ಭದಲ್ಲಿ ಬುಡೋಕಾನ್ ಕರಾಟೆಯಲ್ಲಿ 7ನೆ ಕಪ್ಪುಪಟ್ಟಿ ತೇರ್ಗಡೆ ಯಾದ ರವಿ ಕುಮಾರ್ ಉದ್ಯಾವರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಮಹಮ್ಮದ್ ನಯಾಜ್, ಯು.ಪದ್ಮನಾಭ, ಶರತ್ ಕುಮಾರ್ ಉಪಸ್ಥಿತರಿದ್ದರು.
ಅಧ್ಯಕ್ಷ ಅನೂಪ್ ಕುಮಾರ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯ ದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು. ಹಿರಿಯ ಸದಸ್ಯ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.