ಕುಂಜಾರುಗಿರಿ: ಆರೋಗ್ಯ ಮಾಹಿತಿ ಕಾರ್ಯಕ್ರಮ
ಉಡುಪಿ, ಆ.17: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಮಹಿಳಾ ವೈದ್ಯೆಯರ ಘಟಕ ‘ಗಾರ್ಗಿ’, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಮೂಲಿಕೋದ್ಯಾನ ಘಟಕಗಳ ಸಹಭಾಗಿತ್ವ ದಲ್ಲಿ ಔಷಧೀಯ ಗಿಡಗಳನ್ನು ನೆಡುವ ಹಾಗೂ ಆರೋಗ್ಯ ಮಾಹಿತಿ ಕಾರ್ಯ ಕ್ರಮವನ್ನು ಕುಂಜಾರುಗಿರಿ ಆನಂದ ತೀರ್ಥ ವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ವಿದ್ಯಾಲಯದ ವಿದ್ಯಾರ್ಥಿನಿಯರು, ಶಿಕ್ಷಕಿಯರ ಜೊತೆಗೂಡಿ ಶಾಲಾ ಆವರಣದಲ್ಲಿ ಔಷಧೀಯ ಸಸ್ಯಗಳನ್ನು ನೆಡಲಾಯಿತು. ಬಳಿಕ ಶಾಲಾ ವಿದ್ಯಾರ್ಥಿನಿಯರಿಗಾಗಿ ಋತುಸ್ರಾವದ ಸಂದರ್ಭದ ಶುಚಿತ್ವ ಮಾನಸಿಕ ಸ್ವಾಸ್ಥ್ಯದ ಕುರಿತು ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಶುಚಿತ್ವ ಹಾಗೂ ಮನೆಮದ್ದುಗಳ ಕುರಿತು ಮಾಹಿತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಗಾರ್ಗಿ ಸಂಘದ ಸದಸ್ಯೆಯರಾದ ಡಾ.ಅಮಲ ಜ್ಯೋತಿ, ಡಾ.ಹರ್ಷಿತಾ ಎಂ.ಎಸ್., ಡಾ. ವಿದ್ಯಾಲಕ್ಷ್ಮೀ ಕೆ., ಡಾ.ನಿವೇದಿತಾ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಆಯೋಜಕಿ ಡಾ.ಸುಮಾ ಮಲ್ಯ ಭಾಗವಹಿಸಿದ್ದರು. ಮೂಲಿಕೋದ್ಯಾನ ಸಂಘದ ಸದಸ್ಯ ಡಾ.ಮೊಹಮ್ಮದ್ ಪೈಸಲ್, ಶಾಲೆಯ ಪ್ರಾಂಶುಪಾಲೆ ಗೀತಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.