ಬಂಟ್ವಾಳ: ಮೈದುಂಬಿ ಹರಿಯುತ್ತಿರುವ ನೇತ್ರಾವತಿ ನದಿ
ಬಂಟ್ವಾಳ, ಆ. 17: ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಬಂಟ್ವಾಳ ವ್ಯಾಪ್ತಿಯ ವಿವಿಧ ಪರಿಸರದಲ್ಲಿ ಕಾಣಿಸಿದ್ದ ನೆರೆ ನೀರು ಶುಕ್ರವಾರ ಕೊಂಚ ಇಳಿಮುಖವಾಗಿದೆ. ತಾಲೂಕಿನಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದ್ದು, 8.3 ಮೀಟರ್ ಮಟ್ಟದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ಪ್ರವಾಹ ತಗ್ಗಿದೆ.
ತಾಲೂಕು ಆಡಳಿತದಿಂದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆ, ಬಂಟ್ವಾಳದ ಹಳೆ ಪ್ರವಾಸಿ ಮಂದಿರ, ನಾವೂರು ಜಿಲ್ಲಾ ಪಂಚಾಯತ್ ಶಾಲೆಗಳಲ್ಲಿ ಒಟ್ಟು ಮೂರು ಕಡೆಗಳಲ್ಲಿ ಗಂಜಿಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ ಬಂಟ್ವಾಳದ ಹಳೆ ಪ್ರವಾಸಿ ಮಂದಿರದಲ್ಲಿ ಸುಮಾರು 40 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಆಡಳಿತ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ.
101 ಮನೆಗಳ 539 ಜನರ ಸ್ಥಳಾಂತರ:
ನೇತ್ರಾವತಿ ನೆರೆಯಿಂದಾಗಿ ಒಟ್ಟು 101 ಮನೆಗಳ 539 ಮಂದಿಯನ್ನು ಆಡಳಿತ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಗೊಳಿಸಿದ್ದಾರೆ. ಇವರಲ್ಲಿ 387 ಮಂದಿಯನ್ನು ಇತರೆ ಸ್ಥಳಗಳಲ್ಲಿ ವಾಸ್ತವ್ಯ ಕಲ್ಪಿಸಿದರೆ, ಗಂಜಿಕೇಂದ್ರಗಳಲ್ಲಿ 152 ಮಂದಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಎಲ್ಲೆಲ್ಲಿ ಸ್ಥಳಾಂತರ?:
ಪಾಣೆಮಂಗಳೂರು ಗ್ರಾಮದಿಂದ ಗುಡ್ಡೆಯಂಗಡಿಯ 24, ಬೋಗೋಡಿಯ 48, ಆಲಡ್ಕದ 105, ಬಂಡ್ಲೆಗುಡ್ಡೆಯ 36, ಸುಣ್ಣದಗೂಡಿನ 32 ಸೇರಿ ಒಟ್ಟು 46 ಮನೆಗಳನ್ನು ಸ್ಥಳಾಂತರಿಸಲಾಗಿದೆ. ಬಿ.ಮೂಡದ ತಲಪಾಡಿಯ 7 ಮನೆಗಳ 65 ಮಂದಿ, ನಂದರಬೆಟ್ಟುವಿನ 20 ಮನೆಗಳ 105 ಮಂದಿ, ಬಸ್ತಿಪಡ್ಪುವಿನ 9 ಮನೆಗಳ 45 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬರಿಮಾರು ಗ್ರಾಮದ ಕಡವಿನಬಳಿಯ 4 ಮನೆಗಳ 25 ಮಂದಿ, ತುಂಬೆ ಗ್ರಾಮದ ರಾಮಲ್ ಕಟ್ಟೆಯ 4 ಮನೆಗಳ 18 ಮಂದಿ, ಬಿ.ಕಸ್ಬಾ ಗ್ರಾಮದ ಬಡ್ಡಕಟ್ಟೆಯ 3 ಮನೆಗಳ 12 ಮಂದಿ ಹಾಗೂ ನಾವೂರು ಗ್ರಾಮದ ಪೆರ್ಲ ಪ್ರದೇಶದ 8 ಮನೆಗಳ 24 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳ ಪುರಸಭೆ ಮತ್ತು ತಾಲೂಕು ಆಡಳಿತ ವತಿಯಿಂದ ಎಲ್ಲ ಸಂತ್ರಸ್ತರಿಗೂ ಊಟ, ವಸತಿಗೆ ಸುರಕ್ಷಿತವಾದ ನೆಲೆಯನ್ನು ಒದಗಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಪಾಣೆಮಂಗಳೂರು ಸೇತುವೆ ಬಿರುಕುಬಿಟ್ಟಿಲ್ಲ: ಸ್ಪಷ್ಟನೆ
ಗುರುವಾರ ರಾತ್ರಿ ನೇತ್ರಾವತಿ ನೀರಿನ ಮಟ್ಟವು 10.6ಕ್ಕೆ ಅಪಾಯದ ಮಟ್ಟಕ್ಕೆ ತಲುಪಿತ್ತು. ನದಿಯ ನೀರು ಏರಿಕೆಯಾಗುತ್ತಿದ್ದಂತೆ ಪ್ರವಾಹದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹಾಗೂ ಸುಳ್ಳು ಸುದ್ದಿಗಲ ಮಹಾಪೂರವೇ ಹರಿದುಬಂದಿತ್ತು. ಅಲ್ಲದೆ, ಪಾಣೆಮಂಗಳೂರು ಸೇತುವೆ ಬಿರುಕುಬಿಟ್ಟು ಕುಸಿಯುವ ಸ್ಥಿತಿಯಲ್ಲಿದೆ ಎಂದು ಮಾಧ್ಯಮಗಳ ಪ್ರತಿನಿಧಿಗಳಿಗೆ ದೂರವಾಣಿ ಕರೆಗಳು ಬರತೊಡಗಿದ್ದವು. ಅಲ್ಲದೆ, ಮಾಧ್ಯಮ ಪ್ರತಿನಿಧಿ ಹಾಗೂ ಸ್ಥಳೀಯರ ಕರೆಗಳು ಬಂದ ನಿಟ್ಟಿನಲ್ಲಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಪಾಣೆಮಂಗಳೂರು ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಯಾವುದೇ ಬಿರುಕು ಇರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಂಬೆ ಡ್ಯಾಂ ಪರಿಶೀಲನೆ:
ಶುಕ್ರವಾರ ಬೆಳಗ್ಗೆ ತುಂಬೆ ಡ್ಯಾಂ ವೀಕ್ಷಣೆಗೆ ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ ಆಗಮಿಸಿದ್ದು, ಪೂರಕ ಮಾಹಿತಿ ಪಡೆದರು. ಬಂಟ್ವಾಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೆಸ್ಕಾಂ ವಿದ್ಯುತ್ ನಿಲುಗಡೆಗೊಳಿಸಿರುವುದರಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಸುದ್ದಿಗಾರರಿಗೆ ಈ ಸಂದರ್ಭ ಹೇಳಿದರು.
ತುಂಬೆ ವೆಂಟೆಡ್ ಡ್ಯಾಂ ಸಮೀಪ ಹಿನ್ನೀರು ಪ್ರದೇಶದಲ್ಲಿ ಬಂಟ್ವಾಳ ಸಬ್ಸ್ಟೇಷನ್ನಿಂದ ತುಂಬೆ ಪಂಪ್ ಹೌಸ್ಗೆ 33 ಕೆವಿ ವಿದ್ಯುತ್ ಲೈನ್ ಎಳೆಯಲಾಗಿದೆ. ನೇತ್ರಾವತಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾದ ಕಾರಣ ವಿದ್ಯುತ್ ಸರಬರಾಜು ನಿಲ್ಲಿಸಲಾಯಿತು. ಇದರಿಂದ ತುಂಬೆಯಲ್ಲಿ ಪಂಪಿಂಗ್ ಸಾಧ್ಯವಾಗದೆ ಗುರುವಾರ ನಗರಕ್ಕೆ ನೀರು ಸರಬರಾಜಿನಲ್ಲಿ ಅಡಚಣೆ ಉಂಟಾಯಿತು ಎಂದು ಮೇಯರ್ ವಿವರಿಸಿದರು.
ತಗ್ಗಿದ ನೆರೆ ನೀರು:
ಗುರುವಾರ ಬೆಳಗಿನ ಜಾವ 9 ಮೀಟರ್ ತಲುಪಿ, ಸಂಜೆಯ ವೇಳೆ 10.2 ಮೀಟರ್ ಆಗಿತ್ತು. ತಗ್ಗು ಪ್ರದೇಶಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಪಾಣೆಮಂಗಳೂರಿನ ಆಲಡ್ಕ ಸಹಿತ ನದಿ ತೀರದ ರಸ್ತೆಗಳಲ್ಲಿ ನೇತ್ರಾವತಿ ನದಿ ನೀರು ಹರಿದಿದ್ದು, ಸ್ಥಳೀಯರು ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ರಾತ್ರಿಯಾಗುತ್ತಿದ್ದಂತೆ ನೀರಿನ ಮಟ್ಟ 10.65ಕ್ಕೆ ಏರತೊಡಗಿತ್ತು. ಆದರೆ ಶುಕ್ರವಾರ ಬೆಳಗ್ಗಿನ ಜಾವವೇ ನದಿ ನೀರು ಇಳಿಮುಖವಾಯಿತು.
ಮಧ್ಯಾಹ್ನದ ವೇಳೆಗೆ 8.8 ಮೀಟರ್ ನಲ್ಲಿ ನೇತ್ರಾವತಿ ಹರಿಯುತ್ತಿದ್ದು, ಅಪಾಯದ ಮಟ್ಟಕ್ಕಿಂತ ಕಡಿಮೆಯಾಗುತ್ತಿದೆ. ಸಂಜೆ ವೇಳೆ 8.3 ಮೀಟರ್ಗೆ ತಲುಪಿದ್ದು, ವಿವಿಧ ಪ್ರದೇಶಗಳಿಗೆ ನುಗ್ಗಿದ್ದ ನೆರೆ ನೀರು ತಗ್ಗಿದೆ. ಈಗಾಗಲೇ ಶಾರದಾ ಹೈಸ್ಕೂಲು, ಬಂಟ್ವಾಳ ಐಬಿಗಳಲ್ಲಿರುವ ಗಂಜಿ ಕೇಂದ್ರಗಳ ಸಂತ್ರಸ್ತರಿಗೆ ಆಡಳಿತ ಊಟ, ವಸತಿ ವ್ಯವಸ್ಥೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಅವರು ಮನೆಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯು.ಟಿ.ಖಾದರ್ ಭೇಟಿ:
ಶುಕ್ರವಾರ ಬೆಳಗ್ಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಈಗಾಗಲೇ ಜಿಲ್ಲಾಡಳಿತ ನೆರೆ ಪೀಡಿತ ಪ್ರದೇಶಗಳ ಜನರಿಗೆ ತಾತ್ಕಾಲಿಕ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಜನರಿಗೆ ಯಾವುದೇ ಸಮಸ್ಯೆ ಗಳು ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ. ಮಳೆ ಕ್ಷೀಣಿಸಿದ ನಂತರವೇ ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತಹಶಿಲ್ದಾರ್ ಪುರಂದರಹೆಗ್ಡೆ, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ವಾರ್ತಾಧಿಕಾರಿ ಖಾದರ್ ಶಾ, ಸಿದ್ದೀಕ್ ಬೋಗೋಡಿ, ರಫೀಕ್ ಮೊದಲಾದವರು ಖಾದರ್ ಜೊತೆಗಿದ್ದರು.
ಗಂಜಿಕೇಂದ್ರಗಳ ವ್ಯವಸ್ಥೆಯ ಕುರಿತು ಪರಿಶೀಲನೆ:
ಜನರಿಗೆ ತೊಂದರೆ ಆಗದಂತೆ ಕ್ರಮ: ಶಾಸಕ ರಾಜೇಶ್ ನಾಯ್ಕ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಉಳಿಪ್ಪಾಡಿ ಅವರು ಗಂಜಿಕೇಂದ್ರಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದರು. ಪ್ರಕೃತಿ ವಿಕೋಪ ನೋಡೆಲ್ ಅಧಿಕಾರಿ ಪ್ರಸನ್ನ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಇಒ ರಾಜಣ್ಣ, ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸಹಿತ ಅಧಿಕಾರಿಗಳೊಂದಿಗೆ ತುರ್ತು ಸ್ಥಿತಿ ನಿಭಾವಣೆ ಕುರಿತು ಮಾಹಿತಿಗಳನ್ನು ಪಡೆದ ಶಾಸಕರು, ಬಳಿಕ ಗಂಜಿಕೇಂದ್ರಗಳ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣ ಆಚಾರ್ಯ, ಪ್ರಧಾನ ಸಿವಿಲ್ ನ್ಯಾಯಧೀಶರಾದ ಎ.ಜಿ.ಗಂಗಾಧರ ಮತ್ತು ಮಲ್ಲನಗೌಡ ಪ್ರತ್ಯೇಕವಾಗಿ ನೆರೆಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.