ಕೇರಳಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿದ ಮುಡಿಪು ಪರಿಸರದ ತಂಡ
ಕೊಣಾಜೆ, ಆ. 17: ಕೇರಳದ ಪ್ರಾರ್ಥನಾ ಮಂದಿರಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ಮುಡಿಪು ಪರಿಸರದ ಎಂಟು ಮಂದಿಯ ತಂಡವೊಂದು ಕೇರಳದ ಪ್ರವಾಹಕ್ಕೆ ಸಿಲುಕಿರುವ ಬಗ್ಗೆ ವರದಿಯಾಗಿದ್ದು, ಇದೀಗ ತಂಡದ ಸದಸ್ಯರ ಮನೆಮಂದಿ ಆತಂಕಗೊಂಡಿದ್ದಾರೆ.
ಮುಡಿಪು ಸಮೀಪದ ಕಂಬ್ಲಪದವಿನ ರವಿ ಕುಟಿನ್ಹ, ಸ್ಟೀವನ್ ಕುಟಿನ್ಹ, ವಿಟ್ಲದ ಸುನಿಲ್, ಸುರೇಶ್, ಪ್ರಕಾಶ್, ವಿಜಯಡ್ಕದ ಪಿಲಿಫ್ ಡಿಸೋಜ ಮತ್ತು ಪಿಲಿಪ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಕಳೆದ ಶನಿವಾರದಂದು ಕೇರಳದ ತ್ರಿಶೂರ್ನ ಮುರಿಂಗೂರು ಬಳಿಯ ಪ್ರಾರ್ಥನಾ ಮಂದಿರಕ್ಕೆ ಪ್ರಾರ್ಥನೆಗಾಗಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಇವರು ಉಳಿದುಕೊಂಡಿದ್ದ ಐದು ಅಂತಸ್ತಿನ ಕಟ್ಟಡದಲ್ಲಿ 2ನೇ ಮಹಡಿವರೆಗೆ ನೀರು ತುಂಬಿಕೊಂಡಿದ್ದು ತಂಡವು ಇದೀಗ ಊಟ, ತಿಂಡಿ ಹಾಗೂ ಹೊರಗಿನ ಸಂಪರ್ಕವೂ ಸಿಗದೆ ಕಂಗಾಲಾಗಿದ್ದಾರೆ ಎನ್ನಲಾಗಿದೆ. ಇದೀಗ ಊರಲ್ಲಿರುವ ಇವರ ಕುಟುಂಬದ ಸದಸ್ಯರು ಆತಂಕಗೊಂಡಿದ್ದು, ಸಚಿವ ಯು.ಟಿ.ಖಾದರ್ ಹಾಗೂ ಮಾಜಿ ಶಾಸಕ ಲೋಬೋ ಅವರ ಸಹಾಯ ಯಾಚಿಸಿ ಅವರ ಸಂಪರ್ಕಕ್ಕಾಗಿ ಹಾಗೂ ರಕ್ಷಣೆ ಮಾಡುವಂತೆ ಮನವಿ ಮಾಡಿದೆ.