ಸಿಪಿಐ ಸಂತಾಪ ಸಭೆ
ಮಂಗಳೂರು, ಆ.17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಒಬ್ಬ ಆದರ್ಶ ರಾಜಕಾರಣಿಯಾಗಿದ್ದರು. ಬಿಜೆಪಿ ಪಕ್ಷೀಯರಾಗಿದ್ದರೂ ಕೂಡಾ ಎಲ್ಲರೊಂದಿಗೂ ನಿಕಟ ಸಂಪರ್ಕ ಹೊಂದಿದ್ದರು. ಸ್ವಾತಂತ್ರ್ಯಾನಂತರದ ಭಾರತದ ರಾಜಕಾರಣದಲ್ಲಿ ಅವರು ಅತ್ಯಂತ ಪ್ರಭಾವಿ ಸಂಸದರಾಗಿದ್ದರು. ಪಾರ್ಲಿಮೆಂಟ್ನಲ್ಲಿ ಅವರು ಮಾತನಾಡುತ್ತಿದ್ದ ಸಂದರ್ಭ ಎಲ್ಲಾ ಪಾರ್ಲಿಮೆಂಟ್ ಸದಸ್ಯರು ಆಲಿಸುವ ವ್ಯವಧಾನ ತೋರುತ್ತಿದ್ದರು ಎಂದು ಸಿಪಿಐ ದ.ಕ. ಮತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಯಾಗಿದ್ದಾಗ ವಾಜಪೇಯಿ ಸಿಪಿಐ ಸಂಯೋಜಿತ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ನ ಸಕ್ರಿಯ ಸದಸ್ಯರಾಗಿದ್ದರು. ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ವೇಳೆ ಅಲ್ಲಿ ನಡೆದ ಗಲಭೆಗಳ ಬಗ್ಗೆ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ‘ಮುಖ್ಯಮಂತ್ರಿ ರಾಜನೀತಿಯನ್ನು ಪಾಲಿಸಬೇಕು’ ಎಂದು ಹೇಳುವ ಮೂಲಕ ಮೋದಿಗೆ ಎಚ್ಚರಿಕೆ ನೀಡಿದ್ದರು ಎಂದು ವಿ.ಕುಕ್ಯಾನ ನೆನಪಿಸಿದರು
ಪಕ್ಷದ ನಾಯಕರಾದ ಶೇಖರ, ಎಸ್. ಬೇರಿಂಜ, ಎಚ್.ರಾವ್ ಮಾತನಾಡಿದರು. ಪ್ರಭಾಕರ ರಾವ್, ಚಿತ್ರಾ, ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಸ್ವಾಗತಿಸಿದರು. ಕರುಣಾಕರ ವಂದಿಸಿದರು.