ಮೂಡುಪೆರಾರ - ಪಡುಪೆರಾರ: ನೀರುಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ
ಕುಟುಂಬಸ್ಥರಿಗೆ ಸಾಂತ್ವನ ನೀಡಿದ ಸಚಿವ ಖಾದರ್
ಮಂಗಳೂರು, ಆ.18: ತಾಲೂಕಿನ ಮೂಡುಪೆರಾರ ಹಾಗೂ ಪಡುಪೆರಾರ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಿಂಡಿ ಅಣೆಕಟ್ಟು ದಾಟುವಾಗ ನೀರುಪಾಲಾಗಿದ್ದ ಇಬ್ಬರ ಮೃತದೇಹಗಳನ್ನು ಗಂಜಿಮಠದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರಿಸಲಾಗಿದೆ. ಸ್ಥಳಕ್ಕೆ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.
ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ತೆಂಕ ಎಕ್ಕೂರುವಿನಲ್ಲಿ ಪತ್ತೆಯಾಗಿದ್ದವು. ಮಾಹಿತಿ ಪಡೆದ ಬಜ್ಪೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಗಂಜಿಮಠದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು.
ಬಜ್ಪೆ ಠಾಣಾ ವ್ಯಾಪ್ತಿಯ ಮೂಡುಪೆರಾರದಲ್ಲಿ ಗುರುವಾರ ಪ್ರತ್ಯೇಕ ಘಟನೆಯಲ್ಲಿ ಕತ್ತಲ್ಸಾರ್ ಕಲ್ಲಟ್ಟ ನಿವಾಸಿ ಚಂದ್ರಹಾಸ ಶೆಟ್ಟಿ (52) ತೋಟದ ಬದಿಯ ತೋಡಿನಲ್ಲಿ ತೆಂಗಿನಕಾಯಿ ಹಿಡಿಯುತ್ತಿದ್ದಾಗ ಕಾಲುಜಾರಿ ಬಿದ್ದು ಕೊಚ್ಚಿ ಹೋಗಿದ್ದರು. ಸಂಬಂಧಿಕರೊಬ್ಬರು ತೋಟದತ್ತ ಹೋಗಿದ್ದಾಗ ಪೊದೆಯಲ್ಲಿ ಚಂದ್ರಹಾಸ ಶೆಟ್ಟಿ ಅವರ ಲುಂಗಿ ಕಂಡುಬಂದಿತ್ತು.
ಮತ್ತೊಂದು ಘಟನೆಯಲ್ಲಿ ಪಡುಪೆರಾರದ ದೈವಸ್ಥಾನದ ಬಳಿ ತೋಡು ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಳು ಜಾರಿ ಬಿದ್ದ ಮೂಡುಪೆರಾರ ನಿವಾಸಿ ದಿವಾಕರ ಗೌಡ (32) ನಾಪತ್ತೆಯಾಗಿದ್ದರು. ಬಜ್ಪೆ ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ, ಮುಳುಗು ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.