ಕೊಡವ ವಿದ್ಯಾರ್ಥಿ ಸಂಘಟನೆಯಿಂದ ಜೀವ ರಕ್ಷಕ ಸಾಮಗ್ರಿಗಳ ಸಂಗ್ರಹ
ಆ.19-20ರಂದು ವಿಶೇಷ ಅಭಿಯಾನ
ಮಂಗಳೂರು, ಆ.18: ಮಳೆ ನೆರೆಯಿಂದಾಗಿ ತತ್ತರಿಸಿರುವ ಕೊಡಗಿನ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊಡವ ವಿದ್ಯಾರ್ಥಿಗಳ ಸಂಘಟನೆಯು ಆ. 19 ಮತ್ತು 20ರಂದು ಸಂತ್ರಸ್ತರಿಗೆ ಅಗತ್ಯವಾದ ಜೀವ ರಕ್ಷಕ ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯ ಮಾಡಲಿದೆ ಎಂದು ಸಂಘಟನೆಯ ಸಲಹೆಗಾರರ ನ್ಯಾಯವಾದಿ ಎಸ್.ಪಿ. ಚಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಕ್ಷಿಣ ಕನ್ನಡದ ಕಾಶ್ಮೀರ, ವೀರ ಯೋಧರ ನಾಡು ಕೊಡಗು ಪ್ರಕೃತಿಯ ಮುನಿಸಿಗೆ ತುತ್ತಾಗಿ ದ್ವೀಪವಾಗಿದೆ. ಅಲ್ಲಿನ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಕಳೆದ 19 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಘಟನೆಯು ನೆರವು ಸಂಗ್ರಹಕ್ಕೆ ಮುಂದಾಗಿದೆ ಎಂದರು.
ಪ್ರಸ್ತುತ ಕೊಡಗಿನ ಸಾವಿರಾರು ವಿದ್ಯಾರ್ಥಿಗಳು ದ.ಕ. ಜಿಲ್ಲೆ ಸೇರಿದಂತೆ ವಿವಿಧ ಕಡೆ ಶಿಕ್ಷಣ ಪಡೆಯುತ್ತಿದ್ದಾರೆ. ಅವರೆಲ್ಲಿ ಬಹುತೇಕರು ತಮ್ಮ ಕುಟುಂಬದ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಜಿಲ್ಲೆಯ ಕೊಡವ ವಿದ್ಯಾರ್ಥಿ ಸಂಘಟನೆಯು 300ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದಲೂ ತಮ್ಮ ಕುಟುಂಬದವರ ಜೊತೆ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಆತಂಕ್ಕೀಡಾಗಿದ್ದಾರೆ. ಅದರ ನಡುವೆಯೂ ಇದೀಗ ನಗರದ ಜನರ ಸಹಕಾರದೊಂದಿಗೆ ಸಂತ್ರಸ್ತರಾಗಿರುವ ತಮ್ಮವರ ನೆರವಿಗೆ ಮುಂದಾ ಗಿದ್ದಾರೆ ಎಂದು ಅವರು ಹೇಳಿದರು.
ಬೆಳಗ್ಗೆ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಕೆಯೊಂದಿಗೆ ನಗರದ ಎಸ್ಡಿಎಂ ಕಾಲೇಜಿನಲ್ಲಿ ಅಗತ್ಯ ವಸ್ತುಗಳ ಸಂಗ್ರಹ ಕಾರ್ಯ ನಡೆಯಲಿದೆ. ಬೆಡ್ಶೀಟ್, ಸ್ವೆಟರ್, ಪ್ರಥಮ ಚಿಕಿತ್ಸೆ ಕಿಟ್ಗಳು, ಹಾಲಿನ ಪುಡಿ, ಔಷಧಿಗಳು, ಸೊಳ್ಳೆ ನಿವಾರಕವಸ್ತುಗಳು, ಪಾದರಕ್ಷೆಗಳು, ಟೂತ್ಪೇಸ್ಟ್, ಬ್ರಶ್ ಮೊದಲಾದ ಜೀವನಾವಶ್ಯಕ ವಸ್ತುಗಳನ್ನು 2 ದಿನಗಳಲ್ಲಿ ಸಂಗ್ರಹಿಸಿ ಬಳಿಕ ನೇರವಾಗಿ ಸಂಘಟನೆಯ ಸದಸ್ಯರು ಅಥವಾ ಜಿಲ್ಲಾಧಿಕಾರಿ ಮೂಲಕ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದು ಎಸ್.ಪಿ. ಚಂಗಪ್ಪ ಹೇಳಿದರು.
2 ದಿನಗಳಿಂದ ಮನೆಯವರ ಸಂಪರ್ಕವಿಲ್ಲ
‘‘ಎರಡು ದಿನಗಳ ಹಿಂದೆ ಮನೆಯವರ ಜತೆ ಮಾತನಾಡಿದ್ದೆ. ಆದರೆ ಕಳೆದೆರಡು ದಿನಗಳಿಂದ ಸಂಪರ್ಕವೇ ಇಲ್ಲ. ಅಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನೆಟ್ವರ್ಕ್ ಕೂಡಾ ಸಿಗುತ್ತಿಲ್ಲ. ಮನೆಯವರು ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಇದ್ದರೂ ಯಾವ ಸ್ಥಿತಿಯಲ್ಲಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ’’ ಎಂದು ಮಡಿಕೇರಿ ಚಿಟ್ಟಳ್ಳಿ ನಿವಾಸಿ, ಮಂಗಳೂರಿನಲ್ಲಿ ತೃತೀಯ ಪದವಿ ಶಿಕ್ಷಣ ಪಡೆಯುತ್ತಿರುವ ಕರಣ್ ಮುತ್ತಣ್ಣ ತಿಳಿಸಿದರು.
ರೆಸಾರ್ಟ್ ಮಾಫಿಯಾಕ್ಕೆ ಸರಕಾರ ಕಡಿವಾಣ ಹಾಕಲಿ
ಮಡಿಕೇರಿ, ಕೊಡಗಿನಲ್ಲಿ ಗುಡ್ಡ ಕಾಡುಗಳಲ್ಲಿ, ದನ ಮೇಯುವ ಜಾಗ ಸೇರಿದಂತೆ ಕೃಷಿ ಭೂ ಪ್ರದೇಶವನ್ನು ಪರಿರ್ವತನೆ ಮಾಡಿ (ಕನ್ವರ್ಶನ್) ಮಾಡಿ ಲೇಔಟ್, ಹೋಮ್ ಸ್ಟೇ ಮಾಡಿರುವುದು ಪ್ರಕೃತಿಯ ವಿಕೋಪಕ್ಕೆ ಬಹುಮುಖ್ಯ ಕಾರಣವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯನ್ನು ನಾಶ ಮಾಡಲಾಗಿದೆ. ಕೇರಳ ಸರಕಾರ ಕೊಡಗಿನಲ್ಲಿ ಹೈಟೆನ್ಸ್ ವಿದ್ಯುತ್ ಅಳವಡಿಕೆ ಮಾಡಿರುವುದು, ಕೇಂಂದ್ರ ಸರಕಾರದಿಂದ ರೈಲು ಮಾರ್ಗಕ್ಕಾಗಿ ವನ್ಯ ಸಂಪತ್ತು, ಪ್ರಾಣಿ ಸಂಕುಲವನ್ನು ನಾಶ ಮಾಡಿದೆ. ನದಿ ತೀರದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಯಾವುದೇ ಕಾರಣಕ್ಕೂ ಕೃಷಿ ಭೂಮಿಯ ಪರಿವರ್ತನೆಗೆ ಅವಕಾಶ ನೀಡಬಾರದು. ಇದೀಗ ಮಡಿಕೇರಿ, ಕೊಡಗು ತತ್ತರಿಸಿದೆ. ಮುಂದೆ, ಇದು ಚಿಕ್ಕಮಗಳೂರು, ಕಾರವಾರದ ಬಳಿಕ ದಕ್ಷಿಣ ಕನ್ನಡಕ್ಕೂ ಬಾಧಿಸುವ ಸಾಧ್ಯತೆ ಇದೆ. ಸರಕಾರ ಈ ಬಗ್ಗೆ ಎಚ್ಚೆತ್ತುಕ್ಕೊಳ್ಳಬೇಕು ಎಂದು ನ್ಯಾಯವಾದಿ ಎಸ್.ಪಿ. ಚಂಗಪ್ಪ ಒತ್ತಾಯಿಸಿದರು.