ಉಡುಪಿ ಜಿಲ್ಲಾಡಳಿತದ ನೇತೃತ್ವದಲ್ಲಿ ಸಂಗ್ರಹಿಸಿದ ನಾಲ್ಕು ಟನ್ ಅಗತ್ಯ ವಸ್ತುಗಳು ಕೇರಳಕ್ಕೆ ರವಾನೆ
ಉಡುಪಿ, ಆ. 19: ಉಡುಪಿ ಜಿಲ್ಲಾಡಳಿತವು ರೋಟರಿ ಕ್ಲಬ್ ಮಣಿಪಾಲ ಹಿಲ್ಸ್, ಎಂಐಟಿ ರೋಟರಾಕ್ಟ್ ಕ್ಲಬ್ ಮತ್ತು ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ಮೊದಲ ಹಂತದಲ್ಲಿ ಸಂಗ್ರಹಿಸಲಾದ ಅಗತ್ಯ ವಸ್ತುಗಳನ್ನು ಇಂದು ಕೇರಳದ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಯಿತು.
ಆ.18ರಿಂದ ಮಣಿಪಾಲ ಮಣ್ಣಪಳ್ಳ ರೋಟರಿ ಹಾಲ್ನಲ್ಲಿ ಮತ್ತು ಮಣಿ ಪಾಲ ಬಸ್ ನಿಲ್ದಾಣ ಬಳಿಯ ಕೆಎಂಸಿ ಕಚೇರಿ ಸಿಬ್ಬಂದಿಗಳ ಕೊಠಡಿಯಲ್ಲಿ ರುವ ವಿಪತ್ತು ನಿವಾರಣಾ ಸಂಗ್ರಹ ಕೇಂದ್ರದಲ್ಲಿ ಸಾರ್ವಜನಿಕರಿಂದ ಚಾದರ್, ಚಾಪೆ, ಅಕ್ಕಿ, ಹೊದಿಕೆ, ಉಡುಪುಗಳು ಸೇರಿದಂತೆ ಒಟ್ಟು ನಾಲ್ಕು ಟನ್ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ.
ಇಂದು ಬೆಳಗ್ಗೆ ಜಿಲ್ಲಾಡಳಿತದಿಂದ ಕೊಡ ಮಾಡಲಾದ ಎರಡು ವಾಹನ ಗಳಲ್ಲಿ ಮೊದಲ ಹಂತದಲ್ಲಿ ಸಂಗ್ರಹವಾದ ವಸ್ತುಗಳನ್ನು ನವ ಮಂಗಳೂರು ಬಂದರಿನಿಂದ ಇಂಡಿಯನ್ ಕೋಸ್ಟ್ ಗಾರ್ಡ್ ಹಗಡು ‘ಸಂಕಲ್ಪ್’ ಮೂಲಕ ಕೇರಳ ರಾಜ್ಯ ಕಲ್ಲಿಕೋಟೆ ಪುನವರ್ಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮತ್ತೆ ಸಂಗ್ರಹಿಸಲಾಗುತ್ತಿರುವ ಅಗತ್ಯ ವಸ್ತುಗಳನ್ನು ಆ.20ರಂದು ಕೇರಳ ಹಾಗೂ ಕೊಡಗು ಜಿಲ್ಲೆಗೆ ಕಳುಹಿಸಿಕೊಡಲಾಗುವುದು. ಅದೇ ರೀತಿ ಮಣಿ ಪಾಲ ಮಾಹೆ ಸ್ವಯಂ ಸೇವಕರು ಸಂಗ್ರಹಿಸಿದ 800 ಕೆ.ಜಿ. ಅಕ್ಕಿ ಮತ್ತು 65 ಹೊದಿಕೆ ಸೇರಿದಂತೆ ವಿವಿಧ ಅಗತ್ಯವಸ್ತುಗಳನ್ನು ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಇಂದು ಬೆಳಗ್ಗೆ ಕೊಡಗು ಜಿಲ್ಲೆಗೆ ಕಳುಹಿಸಲಾಯಿತು ಎಂದು ಅವರು ತಿಳಿಸಿದ್ದಾರೆ.