ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತಿದ್ದ ಮಹಿಳೆಯರಿಗೆ ಆರೆಸ್ಸೆಸ್ ಕಾರ್ಯಕರ್ತರಿಂದ ಹಲ್ಲೆ: ಆರೋಪ
#ಫೇಸ್ ಬುಕ್ ಲೈವ್ ನಲ್ಲಿ ದಾಳಿಯ ದೃಶ್ಯ ಸೆರೆ
#“ಅಂಬೇಡ್ಕರ್ ಹೆಸರಿಗೆ ಕಾಲಿನಿಂದ ಒದ್ದರು”
ಕೊಡಗು, ಆ.20: ಕೊಡಗು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುತ್ತಿದ್ದ ಮಹಿಳೆಯರ ತಂಡವೊಂದರ ಮೇಲೆ ಆರೆಸ್ಸೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಭೀಮಪುತ್ರಿ ಬ್ರಿಗೇಡ್ ನ ಸ್ಥಾಪಕಿ ಭೀಮಪುತ್ರಿ ರೇವತಿ ರಾಜ್ ಎಂಬವರು ತಮ್ಮ ತಂಡದ ಜೊತೆ ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತಿದ್ದರು. ಪ್ರವಾಹ ಸಂತ್ರಸ್ತರ ಪರಿಸ್ಥಿತಿ, ಸಂಕಷ್ಟಗಳನ್ನು ಲೈವ್ ವಿಡಿಯೋ ಮೂಲಕ ಅವರು ಫೇಸ್ ಬುಕ್ ನಲ್ಲಿ ವಿವರಿಸಿದ್ದರು. ರವಿವಾರ ಕೂಡ ಸಂತ್ರಸ್ತರನ್ನು ಅವರು ಭೇಟಿಯಾಗಿ ನೆರವು ನೀಡಿದ್ದಾರೆ. ಆದರೆ ಕ್ಲುಲ್ಲಕ ಕಾರಣಕ್ಕೆ ಸಂಬಂಧಿಸಿ ಆರೆಸ್ಸೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
“ರಾಜರಾಜೇಶ್ವರಿ ನಗರ ಎಂಬಲ್ಲಿ ಗುಡ್ಡ ಕುಸಿಯುವ ಪರಿಸ್ಥಿತಿಯಿತ್ತು. ನಮ್ಮ ವಾಹನದ ಬೋರ್ಡ್ ನೋಡಿ ಒಬ್ಬರು ಗಲಾಟೆ ಮಾಡಲು ಆರಂಭಿಸಿದರು. ನಾನು ಕೂಡಲೇ ಅವರ ಬಳಿ ತೆರಳಿ ಕ್ಷಮೆ ಕೇಳಿ ನಾವು ಬಂದಿರುವ ಉದ್ದೇಶದ ಬಗ್ಗೆ ತಿಳಿಸಿದೆ. ಕೂಡಲೇ ಅವರು ಕೆಟ್ಟ ಮಾತುಗಳಿಂದ ನಿಂದಿಸಿದರು. ಹೆಣ್ಣುಮಕ್ಕಳಿಗೆ ಬಯ್ಯಬೇಡಿ ಎಂದು ನಮ್ಮವರು ಹೇಳಿದರು. ಆರೆಸ್ಸೆಸ್ ನವರು ಖಾಕಿ ಚಡ್ಡಿಗಳನ್ನು ಹಾಕಿಕೊಂಡು ನಮ್ಮ ವಾಹನದ ಬೋರ್ಡ್ ಗೆ ಕಾಲಿನಿಂದ ಒದ್ದರು. ಅಂಬೇಡ್ಕರ್ ಬೋರ್ಡನ್ನು ಕಾಲಿನಿಂದ ಒದ್ದಿದ್ದಾರೆ. ನಮ್ಮನ್ನು ಎಳೆದು ಕೆಳಗಡೆ ಹಾಕಿದರು. ಫೋನ್ ಕಿತ್ತರು. ಮಹಿಳೆಯರಿಗೆ ಸಹಾಯ ಮಾಡಲೆಂದು ನಾವು ಬಂದೆವು, ದಲಿತರಾದ ಮಾತ್ರಕ್ಕೆ ಒಬ್ಬಳು ಹೆಣ್ಣು ರಕ್ಷಣಾ ಕೆಲಸದಲ್ಲಿ ತೊಡಗಬಾರದು ಎಂದು ಇದೆಯೇ?” ಎಂದು ರೇವತಿ ರಾಜ್ ಪ್ರಶ್ನಿಸಿದ್ದಾರೆ.