ಉಪ್ಪಿನಂಗಡಿ: ಭಾರೀ ಮಳೆಗೆ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಕುಸಿತ
ಉಪ್ಪಿನಂಗಡಿ, ಆ. 20: ಸತತ ಮಳೆಗೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿದೆ.
ಕೆಲವು ಕಡೆ ರಸ್ತೆ ಬದಿಯ ತಡೆಗೋಡೆ ಕುಸಿದು ಆಳವಾದ ಕಂದಕದ ಪಾಲಾಗಿದ್ದು, ಕಾಂಕ್ರೀಟ್ ರಸ್ತೆಯ ಅಡಿಭಾಗದ ಮಣ್ಣು ಕೂಡ ಕೊರತಕ್ಕೊಳಗಾಗಿ ಅಪಾಯಕ್ಕೆ ಅಹ್ವಾನ ನೀಡುತ್ತಿವೆ.
ಗುಡ್ಡ ಕುಸಿತವುಂಟಾಗಿ ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದರೂ, ಮುಂದೆ ಮಳೆ ಬಂದರೆ ಇಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಯಾಗುವ ಸಾಧ್ಯತೆ ಇದೆ. ಇಲ್ಲಿನ ಪರಿಸ್ಥಿತಿ ಅವಲೋಕಿಸುವಾಗ ಸದ್ಯಕ್ಕೆ ಇಲ್ಲಿ ಸಂಚಾರ ಕಷ್ಟ ಸಾಧ್ಯವಾಗಿದ್ದು, ಇದನ್ನೆಲ್ಲಾ ಸರಿಪಡಿಸಿ ಸುಗಮ ಸಂಚಾರಕ್ಕೆ ಈ ರಸ್ತೆಯನ್ನು ಅನುವು ಮಾಡಿಕೊಡಲು ಕೆಲ ತಿಂಗಳುಗಳು ಹಿಡಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಇಂದು ಮಧ್ಯಾಹ್ನದ ಸುಮಾರಿಗೆ ಗುಂಡ್ಯದಿಂದ ಮಾರನಹಳ್ಳಿ ತನಕದ ಶಿರಾಡಿ ಘಾಟ್ ರಸ್ತೆಯನ್ನು ಪರಿಶೀಲಿಸಿದಾಗ ಈ ಬಾರಿಯ ಮಳೆಯ ಬರ್ಬರತೆಗೆ ಸಿಲುಕಿದ ಶಿರಾಡಿ ಘಾಟ್ ನ ದೃಶ್ಯಗಳು ಕಂಡು ಬಂದವು.
Next Story