ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಕಸ ನಿರ್ವಹಣೆಗೆ ಸಮರ್ಪಕ ಯೋಜನೆ: ಸಚಿವ ಕೃಷ್ಣ ಬೈರೇಗೌಡ
ಉಡುಪಿ, ಆ.20: ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡುವ ಕುರಿತು ರಾಜ್ಯ ಸರಕಾರ ಸಂಕಲ್ಪ ಮಾಡಿದ್ದು, ರಾಜ್ಯದ ಎಲ್ಲ ಗ್ರಾಪಂ ಗಳಲ್ಲಿಯೂ ಕಸ ನಿರ್ವಹಣಾ ಘಟಕಗಳನ್ನು ಆರಂಭಿಸಿ, ಹಳ್ಳಿಗಳ ನೈರ್ಮಲ್ಯ ಕಾಪಾಡುವುದರ ಜೊತೆ ಉದ್ಯೋಗಾವಕಾಶಗಳನ್ನು ಸೃಷ್ಠಿಸುವ ಯೋಜನೆಯನ್ನು ರೂಪಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಂಡ್ಸೆ ಗ್ರಾಮ ಪಂಚಾಯತ್ನ ಘನ ಮತ್ತು ದ್ರವ ಸಂಪನ್ಮೂಲಗಳ ನಿರ್ವ ಹಣಾ ಘಟಕಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ವಂಡ್ಸೆ ಮಾದರಿಯಲ್ಲಿ ಬೇರೆ ಕಡೆಗಳಲ್ಲಿಯೂ ಈ ರೀತಿ ಕಸ ನಿರ್ವಹಣೆ ಮಾಡಬಹುದಾಗಿದ್ದು, ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು, ಸಾರ್ವಜನಿಕ ಸಂಸ್ಥೆಗಳನ್ನು ಹೆಚ್ಚಾಗಿ ತೊಡ ಗಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು.
ಇಂದು ಗ್ರಾಮೀಣ ಪ್ರದೇಶಗಳಲ್ಲಿಯೂ ಕಸ ನಿರ್ವಹಣೆ ದೊಡ್ಡ ಸಮಸ್ಯೆ ಯಾಗುತ್ತಿದೆ. ಹಳ್ಳಿಗಳಲ್ಲಿಯೂ ಪ್ಲಾಸ್ಟಿಕ್, ಗಾಜು ಸೇರಿದಂತೆ ನಾನಾ ರೀತಿಯ ಕಸ ಎಲ್ಲೆಂದರಲ್ಲಿ ಎಸೆಯುವ ಮೂಲಕ ಗ್ರಾಮಗಳ ನೈರ್ಮಲ್ಯತೆ, ಸ್ವಚ್ಛತೆ ಮತ್ತು ವಾತಾವರಣ ದಿನೇ ದಿನೇ ಕೆಡುತ್ತಿದೆ. ಈವರೆಗೆ ನಾವು ನಗರ ಪ್ರದೇಶಗಳಲ್ಲಿ ಮಾತ್ರ ಸ್ವಚ್ಛತೆ ಬಗ್ಗೆ ಗಮನ ಕೊಡುತ್ತ ಬಂದಿದ್ದೇವೆ. ಈಗ ಹಳ್ಳಿಗಳಲ್ಲಿಯೂ ಇರುವ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮು ಬಂದಿದೆ ಎಂದು ಅವರು ಹೇಳಿದರು.
ಸುಸ್ಥಿರವಾದ ಕಸ ನಿರ್ವಹಣೆ, ಕಸಗಳನ್ನು ಸಂಪನ್ಮೂಲವನ್ನಾಗಿ ಮಾರ್ಪಡಿ ಸುವುದು ಹಾಗೂ ಅದರಿಂದ ಆದಾಯ ಮತ್ತು ಉದ್ಯೋಗ ಪಡೆಯುವ ಮೂಲಕ ಹಳ್ಳಿಗಳ ನೈರ್ಮಲತೆಯನ್ನು ಶಾಶ್ವತವಾಗಿ ಕಾಪಾಡುವ ಅವಕಾಶ ಗಳಿವೆ. ಈಗಾಗಲೇ ಇಂತಹ ಪ್ರಯತ್ನವೊಂದು ವಂಡ್ಸೆ ಗ್ರಾಪಂನಲ್ಲಿ ಆರಂಭ ವಾಗಿರುವುದರಿಂದ ಇಲ್ಲಿನ ಅನುಭವ ಪಡೆದು, ಅದರ ಆಧಾರದಲ್ಲಿ ರಾಜ್ಯದ ಬೇರೆ ಗ್ರಾಪಂಗಳಲ್ಲಿಯೂ ಆರಂಭಿಸುವ ಪ್ರಯತ್ನ ಮಾಡಲಾಗುವುದು. ಈ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹಳ್ಳಿಗಳ ವಾತಾವಾರಣ ಕೂಡ ಮತ್ತಷ್ಟು ಕೆಡಲಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯವು ಶೇ.93ರಷ್ಟು ಪೂರ್ಣಗೊಂಡಿದೆ. ಈವರೆಗೆ 45 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇನ್ನು ನಾಲ್ಕು ಲಕ್ಷ ಶೌಚಾಲಯಗಳು ನಿರ್ಮಾಣಕ್ಕೆ ಮಾತ್ರ ಬಾಕಿ ಇದೆ. ಅದನ್ನು ಮಾಡುವುದರ ಜೊತೆಗೆ, ಮುಂದಿನ ಸವಾಲು ಕಸ ನಿರ್ವಹಣೆಯ ಬಗ್ಗೆಯೂ ಸರಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದರು.
ಈಗಾಗಲೇ ಕಸ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಬೇರೆ ಗ್ರಾಪಂಗಳ ಅನುಭವವನ್ನು ಪಡೆದುಕೊಂಡು, ಹೊಸದಾಗಿ ಆರಂಭಿಸುವ ಗ್ರಾಪಂಗಳಿಗೆ ಸರಕಾರ ಬೆನ್ನೆಲು ಆಗಿ ನಿಲ್ಲಬೇಕಾಗಿದೆ. ಕಸ ಶುಲ್ಕ ಮತ್ತು ಕಸ ಮಾರಾಟದಿಂದ ತಿಂಗಳಿಗೆ 75,000ರೂ. ಆದಾಯ ಪಡೆಯಬಹುದಾಗಿರುವುದರಿಂದ ಇದಕ್ಕೆ ಅನುದಾನ ಮುಖ್ಯಾಗಲ್ಲ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಜಿಪಂ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಶಿವಾನಂದ ಕಾಪಶಿ, ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕರ ಆಚಾರ್ಯ ಮೊದಲಾದ ವರು ಉಪಸ್ಥಿತರಿದ್ದರು.