ತೆಂಕೊಡಿಗೆ ಗುಡ್ಡ ಕುಸಿದ ಪ್ರದೇಶಕ್ಕೆ ಸಚಿವ ಕೃಷ್ಣ ಬೈರೇಗೌಡ ಭೇಟಿ
ಕುಂದಾಪುರ, ಆ.20: ವಂಡ್ಸೆ ಗ್ರಾಪಂ ವ್ಯಾಪ್ತಿಯ ತೆಂಕೊಡಿಗೆ ಎಂಬಲ್ಲಿ ಐದು ದಿನಗಳ ಹಿಂದೆ ಭಾರೀ ಮಳೆಯಿಂದ ಗುಡ್ಡ ಕುಸಿದ ಸ್ಥಳಕ್ಕೆ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ರಾಜ್, ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಇಂದು ಭೇಟಿ ನೀಡಿದರು.
ಗುಡ್ಡ ಕುಸಿತದಿಂದ ಹಾನಿಗೊಳಗಾಗಿರುವ ಮನೆಯ ಯಜಮಾನ, ಕೂಲಿ ಕಾರ್ಮಿಕ ಶಿವರಾಮ ಪೂಜಾರಿ ಅವರಿಂದ ಘಟನೆ ಕುರಿತ ಮಾಹಿತಿ ಪಡೆದು ಕೊಂಡ ಸಚಿವರು, ಈ ಸಂಬಂಧ ಜಿಲ್ಲಾಡಳಿತದಿಂದ ಪರಿಹಾರ ಮೊತ್ತ ಪಡೆದು ಕೊಳ್ಳುವಂತೆ ತಿಳಿಸಿದರು. ಈ ಮನೆಗೆ ನೆರವು ನೀಡುವಂತೆ ಸ್ಥಳೀಯ ಗ್ರಾಪಂಗೆ ಸೂಚಿಸಿದರು.
ಗುಡ್ಡ ಅಗೆದಿರುವುದರ ಪರಿಣಾಮ ಈ ಅನಾಹುತ ಸಂಭವಿಸಿದೆ. ಮುಂದೆ ಈ ರೀತಿ ಗುಡ್ಡ ಅಗೆಯಬಾರದು. ಅಲ್ಲದೆ ಇಂತಹ ಅನಾಹುತಗಳನ್ನು ತಡೆಯಲು ಗುಡ್ಡದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಬೇಕು ಎಂದು ಸಚಿವರು ಮನೆಯವರಿಗೆ ಹಾಗೂ ಗ್ರಾಪಂಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.