ದೇಶಕ್ಕೆ ರಾಜೀವ್ಗಾಂಧಿ, ಅರಸು ಕೊಡುಗೆ ಅಪಾರ: ಹರೀಶ್ಕುಮಾರ್
ಮಂಗಳೂರು, ಆ.20: ರಾಜೀವ್ಗಾಂಧಿ ಹಾಗೂ ದೇವರಾಜ್ ಅರಸು ದೇಶಕ್ಕೆ ಹಾಗೂ ರಾಜ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದ್ದು, ಅವರ ತತ್ವಾ ದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ಕುಮಾರ್ ತಿಳಿಸಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ರಾಜೀವ್ಗಾಂಧಿ ಹಾಗೂ ಡಿ.ದೇವರಾಜ್ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೋಷಿತ ವರ್ಗಕ್ಕೆ ಅರಸು ಶಕ್ತಿ ಕೊಟ್ಟ ನಾಯಕರಾಗಿದ್ದಾರೆ. ಜೀತಪದ್ಧತಿ ನಿರ್ಮೂಲನೆ, ಅರಣ್ಯ ಸಂಪತ್ತಿನ ಸಂರಕ್ಷಣೆಗೆ ನಾಂದಿ ಹಾಡಿದರು. ಮುಂದಿನ ವರ್ಷ ರಾಜೀವ್ಗಾಂಧಿ 75ನೇ ಹಾಗೂ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಕರೆ ನೀಡಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಭಾರತವನ್ನು ಪ್ರಪಂಚವೇ ಗುರುತಿಸುವಂತೆ ಮಾಡಿದ ರಾಜೀವ್ಗಾಂಧಿ, ಪಂಚಾಯತ್ ರಾಜ್ ತಿದ್ದುಪಡಿ ತಂದು ಮಹಿಳೆಯರಿಗೆ ಪ್ರಾಶಸ್ತ್ಯ ನೀಡಿ ಸಬಲೀಕರಣಕ್ಕೆ ಒತ್ತು ನೀಡಿದರು ಎಂದು ಹೇಳಿದರು.
ಅರಸು ಇಂದಿರಾಗಾಂಧಿ ಅವರ ಭೂಮಸೂದೆ ಇತ್ಯಾದಿ ಜನೋಪಯೋಗಿ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದರ ಮೂಲಕ ಹಿಂದುಳಿದ ವರ್ಗ, ದುರ್ಬಲ ವರ್ಗದವರ ಧ್ವನಿಯಾಗಿ ಮೂಡಿಬಂದರು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕಂಪ್ಯೂಟರ್, ಮೊಬೈಲ್ ಫೋನ್, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜೀವ್ಗಾಂಧಿ ದೊಡ್ಡ ಕ್ರಾಂತಿ ಮಾಡಿದ ಕೀರ್ತಿ ಹೊಂದಿದ್ದಾರೆ. ರಾಜ್ಯದ ಬಡವವರ್ಗದವರಿಗೆ ಸ್ವಾಭಿಮಾನದ ಬದುಕನ್ನು ರೂಪಿಸಿದ ಕೀರ್ತಿ ಅರಸು ಅವರಿಗೆ ಸಲ್ಲಬೇಕು ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್ ಮಾತನಾಡಿದರು.
ಸಭೆಯಲ್ಲಿ ಎಐಸಿಸಿ ಸದಸ್ಯೆ ಕವಿತಾ ಸನಿಲ್, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕೆಪಿಸಿಸಿ ಕಾರ್ಯದರ್ಶಿ ನವೀನ್ ಡಿಸೋಜ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಬಿನ್ನು, ಮನಪಾ ಸದಸ್ಯರಾದ ಆಶಾ ಡಿಸಿಲ್ವಾ, ಪ್ರತಿಭಾ ಕುಳಾಯಿ, ಡಿ.ಕೆ. ಅಶೋಕ್, ಸಬಿತಾ ಮಿಸ್ಕಿತ್, ಟಿ.ಕೆ ಶೈಲಜಾ, ನಾಗವೇಣಿ, ಕೇಶವ ಮರೋಳಿ, ಉಪಾಧ್ಯಕ್ಷ ಅಬೂಬಕರ್ ಕುದ್ರೋಳಿ, ಕಾರ್ಯಕಾರಿಣಿ ಸಮಿತಿ ಸದಸ್ಯೆ ಬಿ.ಎಂ. ಭಾರತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ನೀರಜ್ಪಾಲ್, ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಖಾಲಿದ್ ಉಜಿರೆ, ಪ್ರೇಮ್ ಬಳ್ಳಾಲ್ಬಾಗ್, ಸಿ.ಎಂ. ಮುಸ್ತಫಾ, ಸ್ಟೀಫನ್ ಮರೋಳಿ, ಪೀಯೂಸ್ ಮೊಂತೆರೊ, ಅರುಣ್ ಕುವೆಲ್ಲೊ, ಶುಭೋದಯ ಆಳ್ವ, ಟಿ.ಕೆ ಸುಧೀರ್, ಬಿ.ಕೆ. ಇದಿನಬ್ಬ, ಹಿಲ್ಡಾ ಆಳ್ವ, ಬಿ.ಜೆ. ಸುವರ್ಣ, ಶಕುಂತಲಾ ಕಾಮತ್, ತೆರೇಜಾ ಪಿಂಟೊ, ಪದ್ಮನಾಭ ಅಮೀನ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
ಮನಪಾ ಮುಖ್ಯಸಚೇತಕ ಎಂ.ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಸೇವಾದಳ ಮುಖ್ಯಸ್ಥ ಎಚ್.ಎಂ. ಅಶ್ರಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.