ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅವೈಜ್ಞಾನಿಕ ಮಾಹಿತಿ ಪ್ರಚಾರ: ನರೇಂದ್ರ ನಾಯಕ್
ನರೇಂದ್ರ ದಾಬೋಲ್ಕರ್ ಸ್ಮರಣಾರ್ಥ ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನಾಚರಣೆ
ಮಂಗಳೂರು, ಆ.20: ಐಐಟಿಯಂತಹ ದೇಶದ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲೂ ಅವೈಜ್ಞಾನಿಕ ಮಾಹಿತಿಯನ್ನು ಪ್ರಚಾರ ಮಾಡುವ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ರಾಷ್ಟ್ರೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ತಿಳಿಸಿದ್ದಾರೆ.
ನಗರದ ಕೆಬಿಇಎ ಸಭಾಂಗಣದಲ್ಲಿಂದು ನರೇಂದ್ರ ದಾಬೋಲ್ಕರ್ ಅವರ ಸ್ಮರಣಾರ್ಥ ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ದೇಶದ ನಾಗರಿಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಆದರೆ ಈ ನಿಟ್ಟಿನಲ್ಲಿ ಸಕ್ರೀಯವಾಗಿರುವ ವಿಚಾರವಾದಿಗಳ ಮೇಲೆ ಹೋರಾಟ ನಡೆಸುತ್ತಿರುವವರ ಮೇಲೆ ,ಕೊಲೆಗಳು ನಡೆಯುತ್ತಿವೆ.ಈ ಘಟನೆಗೆ ಹತ್ಯೆಗೀಡಾದ ನರೇಂದ್ರ ದಾಬೋಲ್ಕರ್ ಒಂದು ಉದಾಹರಣೆ. ನರೇಂದ್ರ ದಾಬೋಲ್ಕರ್ ಅವೈಜ್ಞಾನಿಕವಾದ ಆಚರಣೆಗಳು, ಕಂದಾ ಚಾರಗಳನ್ನು ವಿರೋಧಿಸಿದರು. ಅವರ ಹೋರಾಟದ ಫಲವಾಗಿ ದಾಬೋಲ್ಕರರ ಹತ್ಯೆಯ ಬಳಿಕ ಮಹಾರಾಷ್ಟ್ರದಲ್ಲಿ ಮೌಢ್ಯವಿರೋಧಿ ಕಾನೂನು ಜಾರಿಗೆ ಬಂತು ಎನ್ನುವುದು ಒಳ್ಳೆಯ ಬೆಳವಣಿಗೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದಾಗ ವೈದ್ಯಕೀಯ ವಿಚಾರಗಳಲ್ಲಿ ಮಾನಸಿಕ ಆರೋಗ್ಯದ ವಿಚಾರಗಳಲ್ಲಿ ಸಾಕಷ್ಟು ಅವೈಜ್ಞಾನಿಕವಾದ ವಿಚಾರಗಳನ್ನು ಜನಸಾಮಾನ್ಯರ ಮತ್ತು ಸಾಕಷ್ಟು ಶಿಕ್ಷಣ ಪಡೆದ ಎರಡು ವರ್ಗಗಳಲ್ಲಿ ಪ್ರಚಾರ ಮಾಡಲಾಗುತ್ತದೆ ಎಂದು ನರೇಂದ್ರ ನಾಯಕ್ ತಿಳಿಸಿದ್ದಾರೆ.
ಮನೋರೋಗಳ ಬಗ್ಗೆ ಸಾಕಷ್ಟು ಮೂಢ ನಂಬಿಕೆಗಳಿವೆ:- ಸಾಕಷ್ಟು ಮನೋರೋಗಳ ಜನರಿಗೆ ಅರಿವಿನ ಕೊರತೆ ಇರುವ ಕಾರಣ ಮೌಢ್ಯದ ಆಚರಣೆ ಇಂದಿಗೂ ನಡೆಯುತ್ತದೆ. ಇದರಿಂದ ಜೀವಹಾನಿಯಾದ ಉದಾಹರಣೆಗಳು ಇವೆ ಎಂದು ಮನೋ ರೋಗ ತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ. ಅಪಸ್ಮಾರ (ಪಿಟ್ಸ್) ಕಾಯಿಲೆಯ ಬಗ್ಗೆ ಅದರ ಚಿಕಿತ್ಸೆಯ ಬಗ್ಗೆ ಇಂದಿಗೂ ಸಾಕಷ್ಟು ಮೂಢ ನಂಬಿಕೆಗಳು ಆಚರಣೆಗಳು ನಡೆಯುತ್ತಲೆ ಇದೆ. ರೋಗ ಪೀಡಿತನಾದಾಗ ಆತನ ಕೈಗೆ, ಬಾಯಿಗೆ ಕಬ್ಬಿಣ ತುರುಕುವುದು ಈರುಳ್ಳಿ ಕೊಡುವುದು ನಡೆಯುತ್ತಿದೆ. ಅಪಸ್ಮಾರವಾದಾಗ ಮೊದಲು ಆತನಿಗೆ ಪ್ರಥಮ ಚಿಕಿತ್ಸೆ ನೀಡಬೇಕು. ಬಳಿಕ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಅದು ಮೂರರಿಂದ ನಾಲ್ಕು ನಿಮಿಷದ ಅವಧಿಗೆ ಸೀಮಿತವಾಗುತ್ತದೆ. ದೆವ್ವ ಬಿಡಿಸುವುದು, ಹಿಂದಿನ ಜನ್ಮ ವೃತ್ತಾಂತವನ್ನು ತಿಳಿಸುವ ಹೆಸರಿನಲ್ಲಿ ಅವೈಜ್ಞಾನಿಕವಾದ ಮೌಢ್ಯ ಆಚರಣೆಗಳನ್ನು ಬಿತ್ತಲಾಗುತ್ತಿದೆ. ತಮಿಳು ನಾಡಿನ ಎರವಾಡದಲ್ಲಿ ನಡೆದ ದುರಂತದಲ್ಲಿ ಮಾನಸಿಕ ರೋಗಿಗಳ ಕೇಂದ್ರದಲ್ಲಿ ಬೆಂಕಿ ಅನಾಹುತವಾದ ಸಂದರ್ಭದಲ್ಲಿ ಕೆಲವು ದೇಹಗಳನ್ನು ಸರಪಳಿಯಲ್ಲಿ ಬಿಗಿದಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ರೀತಿ ಮಾನವಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಮೌಢ್ಯತೆಯ ಹೆಸರಿನಲ್ಲಿ ನಡೆಯುತ್ತಿದೆ ಎಂದು ನರೇಂದ್ರ ನಾಯಕ್ ತಿಳಿಸಿದ್ದಾರೆ.
ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾನಸಿಕ ತಜ್ಞರ ಕೊರತೆ ಇದೆ. ದುರ್ಬಲ ಮಾನಸಿಕ ಸ್ಥಿತಿಯಲ್ಲಿರುವ ಮಾನಸಿಕ ರೋಗದ ಜನರು ಈ ರೀತಿಯ ಮೌಢ್ಯ ಆಚರಣೆ ನಡೆಸುವವರ ಹಿಂದೆ ಹೋಗುತ್ತಿರುವುದು ಕಂಡು ಬರುತ್ತಿದೆ.ಖಿನ್ನತೆ ಯಂತಹ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತವಾದ ಮಾರ್ಗದರ್ಶನ ಚಿಕಿತ್ಸೆಯ ಅಗತ್ಯವಿದೆ ಎಂದು ಡಾ.ಪಿ.ವಿಭಂಡಾರಿ ತಿಳಿಸಿದ್ದಾರೆ.
ಸಮುದಾಯ ಸಂಘಟನೆಯ ಸಂಚಾಲಕರಾದ ವಾಸುದೇವ ಉಚ್ಚಿಲ್ ಸ್ವಾಗತಿಸಿದರು.