ಶಾಂತಿಯುತ ಬಕ್ರೀದ್ ಆಚರಣೆ: ಉಡುಪಿ ಜಿಲ್ಲಾಧಿಕಾರಿಗೆ ಮನವಿ
ಉಡುಪಿ, ಆ.20: ಬಕ್ರೀದ್ ಮತ್ತು ಖುರ್ಬಾನಿ ಆಚರಣೆಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ನಿಯೋಗ ಆ.18ರಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭ ಖುರ್ಬಾನಿ ನಡೆಸುವುದು ಕಡ್ಡಾಯ ಕ್ರಮವಾಗಿದೆ. ಇದಕ್ಕೆ ಸಂವಿಧಾನದ ಅನುಮತಿ ಕೂಡ ಇದೆ. ಸಂವಿಧಾನಬದ್ಧ ಇಂತಹ ಆಚರಣೆಗೆ ಕೆಲವು ಕಿಡಿಗೇಡಿಗಳು ಅಡ್ಡಿ ಆತಂಕ ಉಂಟು ಮಾಡಿ ಸಾಮಾಜಿಕ ಅಶಾಂತಿ ಸೃಷ್ಠಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದುದರಿಂದ ಹಬ್ಬ ಮತ್ತು ಅದಕ್ಕೆ ಸಂಬಂಧಪಟ್ಟ ಆಚರಣೆ ಸಂದರ್ಭ ಹೆಚ್ಚಿನ ಭದ್ರತೆ ಒದಗಿಸಬೇಕು. ಆ ಮೂಲಕ ಶಾಂತಿಯುತವಾಗಿ ಹಬ್ಬ ಆಚರಣೆಗೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿಯನ್ನು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವೀಕರಿಸಿದರು.
ನಿಯೋಗದಲ್ಲಿ ಕೌನ್ಸಿಲ್ ಅಧ್ಯಕ್ಷ ವೌಲಾನಾ ಇಸ್ಮಾಯಿಲ್ ನದವಿ, ಮೌಲಾನಾ ಜಾವೇದ್ ಖಾಸ್ಮಿ, ಹಾಫೀಝ್ ಅಬ್ದುಲ್ ಗಫೂರ್, ಹಾಫೀಝ್ ಸಾಬಿರ್, ಹಾಫೀಝ್ ಯೂನುಸ್ ಮೊದಲಾದವರು ಉಪಸ್ಥಿತರಿದ್ದರು.