ಬಂಟ್ವಾಳ: ಮನೆಮಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದರೋಡೆ
ಬಂಟ್ವಾಳ, ಆ. 21: ಮುಸುಕುದಾರಿ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ಲೊರೆಟ್ಟೊಪದವು ಸಮೀಪದ ಕಮಲ್ಕಟ್ಟೆ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಅಮ್ಟಾಡಿ ಗ್ರಾಮದ ಲೊರೆಟ್ಟೊಪದವು ನಿವಾಸಿ ಜೇಕಬ್ ರೋಡ್ರಿಗಸ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ಸೋಮವಾರ ತಡರಾತ್ರಿ ಸುಮಾರು 1.30ರ ವೇಳೆಗೆ ಐದು ಮಂದಿಯ ಮುಸುಕುದಾರಿ ತಂಡವೊಂದು ಜೇಕಬ್ ಅವರ ಮನೆಯ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದೆ. ತದನಂತರ ಮನೆಯಲ್ಲಿದ್ದ ಜೇಕಬ್ ಮತ್ತು ಮಗಳು ಅಲ್ಮೀರಾ ಅವರ ಕೈಕಾಲುಗಳನ್ನು ಕಟ್ಟಿಹಾಕಿದ್ದಾರೆನ್ನಲಾಗಿದ್ದು, ಬಳಿಕ ಜೇಕಬ್ ಅವರ ಪತ್ನಿ ಗ್ರೇಟಾ ಅವರಿಗೆ ಚಿನ್ನಾಭರಣವನ್ನು ತೋರಿಸಿವಂತೆ ಹೆದರಿಸಿ ಕಪಾಟಿನಲ್ಲಿದ್ದ ಸೊತ್ತುಗಳನ್ನು ದೋಚಿದ್ದಾರೆನ್ನಲಾಗಿದೆ.
ಕಪಾಟಿನಲ್ಲಿದ್ದ ಸುಮಾರು ಚಿನ್ನದ ಸರ, ನಾಲ್ಕು ಉಂಗುರ, ವಾಚು ಹಾಗೂ ಮೊಬೈಲ್ ಫೋನ್ ಅನ್ನು ದರೋಡೆ ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಎಡಿಷನಲ್ ಎಸ್ಪಿ ವಿ.ಜೆ. ಸಜಿತ್, ಎಸ್ಪಿ ರಿಷಿಕೇಶ್ ಸೋನಾವಣೆ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಎಸ್ಸೈಗಳಾದ ಚಂದ್ರಶೇಖರ್, ಹರೀಶ್, ಪ್ರೋಬೆಷನರಿ ಪಿಎಸ್ಸೈ ಸೌಮ್ಯ, ಎಸ್ಸೈ ಸಂಜೀವ, ಎಚ್.ಸಿ. ಸುರೇಶ್ ಪಡಾರ್, ಸಿಬ್ಬಂದಿಗಳಾದ ಮಲಿಕ್ ಸಾಬ್, ಕುಮಾರ್, ವಿವೇಕ್, ಸುಜು, ಗೋಣಿಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.