ಬಕ್ರೀದ್ ಹೊಸ ಬಟ್ಟೆ ಖರೀದಿಗೆ ಕೂಡಿಟ್ಟಿದ್ದ ಹಣವನ್ನು ಕೊಡಗಿನ ನಿರಾಶ್ರಿತರಿಗೆ ನೀಡಿದ 4ರ ಪೋರ
ಮೂಡಿಗೆರೆ, ಆ.21: ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಹೊಸ ಉಡುಪು ಕೊಳ್ಳಲು ತನ್ನ ತಂದೆಯಿಂದ ಪಡೆದು ಸಂಗ್ರಹಿಸಿಟ್ಟಿದ್ದ 1ಸಾವಿರ ರೂ. ಹಣವನ್ನು ಕೊಡಗಿನ ನೆರೆ ಪೀಡಿತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಲು ಬಾಪು ನಗರದ ನದೀಮ್ ಅಹ್ಮದ್ ಎಂಬವರ ಪುತ್ರ, ಬೆತನಿ ಶಾಲೆಯ ಯುಕೆಜಿ ವಿದ್ಯಾರ್ಥಿ ಝಿಯಾನ್ ಅಹ್ಮದ್, ಪೀಸ್ ಆ್ಯಂಡ್ ಅವೇರ್ ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ ಅವರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾನೆ.
ಮಹಾಮಳೆಗೆ ಕೊಡಗು ಜಿಲ್ಲೆ ತತ್ತರಿಸಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಮಂಗಳೂರು ಮತ್ತು ಕೇರಳದಲ್ಲೂ ನೆರೆಯಿಂದ ನಿರಾಶ್ರಿತರಾಗಿ ಗಂಜಿ ಕೇಂದ್ರಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಇಂತಹ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಬಕ್ರೀದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸದಿರಲು ಮುಸ್ಲಿಂಮರು ನಿರ್ಧಾರ ಕೈಗೊಂಡಿದ್ದಾರೆ.
ಈ ವಿಚಾರವವನ್ನು ತನ್ನ ಪೋಷಕರಿಂದ ತಿಳಿದ ಪುಟ್ಟ ಬಾಲಕ, ನಾನು ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವುದಿಲ್ಲ. ಹಳೆ ಬಟ್ಟೆಯಲ್ಲೇ ಹಬ್ಬವನ್ನು ಸರಳವಾಗಿ ಆಚರಿಸುತ್ತೇನೆ ಹೊಸ ವಸ್ತ್ರ ಖರೀದಿಸಲು ಕೂಡಿಟ್ಟಿದ್ದ ಹಣವನ್ನು ನಿರಾಶ್ರಿತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಡಿ ಎಂದು ಹೇಳಿ ಹಣವನ್ನು ಹಸ್ತಾಂತರಿಸಿದ್ದಾನೆ.