ಪರ್ಯಾಯ ಪಲಿಮಾರು ಶ್ರೀಗಳಿಂದ ಕೊಡಗು ಗ್ರಾಮ ದತ್ತು ಯೋಜನೆ
ಉಡುಪಿ, ಆ.21: ರಾಜ್ಯದ ಕೊಡಗಿನ ವೀರಭೂಮಿ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಅಪಾರ ಸಂಕಷ್ಟಕ್ಕೆ ಗುರಿಯಾಗಿದ್ದು, ಇಲ್ಲಿ ತಮ್ಮೆಲ್ಲವನ್ನೂ ಕಳೆದುಕೊಂಡ ಜನರ ಪುನರ್ವಸತಿ ಕಾರ್ಯದಲ್ಲಿ ಕೈಜೋಡಿಸಲು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮುಂದಾಗಿದ್ದು, ಅಲ್ಲಿನ ಗ್ರಾಮವನ್ನು ದತ್ತು ಪಡೆಯುವ ಯೋಜನೆಯನ್ನು ಪ್ರಕಟಿಸಿದ್ದಾರೆ.
‘ಪ್ರಕೃತಿ ಒಲಿದರೆ ಸ್ವರ್ಗ, ಮುನಿದರೆ ನರಕ’ ಎಂಬುದಕ್ಕೆ ಸಾಕ್ಷಿಯಾಗಿ ಅತಿವೃಷ್ಠಿಯಿಂದ ತತ್ತರಿಸಿರುವ ಕೊಡಗಿನ ಜನರಿಗೆ ನೆರವಾಗುವಲ್ಲಿ, ಇಡೀ ಊರಿಗೆ ಕೊಡೆ ಹಿಡಿಯಲು ಸಾಧ್ಯವಿಲ್ಲದಿದ್ದರೂ, ತಮ್ಮ ಕೈಲಾದುದನ್ನು ಮಾಡುವ ಸಂಕಲ್ಪದೊಂದಿಗೆ ಗ್ರಾಮಗಳನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ. ಇದರಿಂದ ಭಗವಂತನ ಪೂಜೆಯನ್ನು ಮಾಡಿದಂತಾಗುತ್ತದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ ಈ ಯೋಜನೆಗೆ ಎಲ್ಲರೂ ಕೈಜೋಡಿಸಬೇಕು ಎಂದವರು ಕೋರಿದ್ದಾರೆ. ಯಾರ್ಯಾರಲ್ಲಿ ಏನೇನಿದೊ ಅದನ್ನು ಉದಾರವಾಗಿ ಕೊಟ್ಟು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿಕೆಯಲ್ಲಿ ವಿನಂತಿಸಿದ್ದಾರೆ.