ದ.ಕ ಜಿಲ್ಲೆಯಲ್ಲಿ ಸರಳ ಬಕ್ರೀದ್ ಆಚರಣೆ
ಮಂಗಳೂರು, ಆ. 22: ಪ್ರವಾದಿ ಇಬ್ರಾಹಿಂ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ಅವರ ತ್ಯಾಗದ ಸಂಕೇತವಾಗಿ ಆಚರಿಸಲಾಗುವ ಬಕ್ರೀದ್ ಹಬ್ಬವನ್ನು ಇಂದು ದ.ಕ. ಜಿಲ್ಲೆಯಾದ್ಯಂತ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಜಲಪ್ರಳಯದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಖಾಝಿಯವರ ಕರೆಯ ಮೇರೆಗೆ ಸರಳ ರೀತಿಯಲ್ಲಿ ಹಬ್ಬ ಆಚರಣೆಗೆ ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ. ಬಾವುಟ ಗುಡ್ಡೆ ಈದ್ಗಾ ಮಸೀದಿಯಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದುಲ್ ಅಝ್ಹಾ ಪ್ರಾರ್ಥನೆ ನಡೆಯಿತು.
ಈದ್ ಸಂದೇಶ ಹಾಗೂ ಪ್ರವಚನ ನೀಡಿದ ಖಾಝಿಯವರು ಕೇರಳ ಹಾಗೂ ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಕರೆ ನೀಡಿದರು.
ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ಕುಂಞ ಈದ್ ಸಂದೇಶ ನೀಡಿದರು.
ಈ ಸಂದರ್ಭ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಐವನ್ ಡಿಸೋಜಾ, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ.ಡಾ. ಡೈನೇಶಿಯಸ್ ವಾರ, ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ ಮಾರ್ಟಿಸ್, ಮೇಯರ್ ಭಾಸ್ಕರ ಕೆ. ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಸೀದಿಯ ಧರ್ಮಗುರು ಸದಕತುಲ್ಲಾ ಫೈಝಿ, ಸ್ಥಳೀಯ ಮಸೀದಿಯ ಧರ್ಮಗುರು ಸದಕತುಲ್ಲಾ ನದವಿ, ಕೋಶಾಧಿಕಾರಿ ಅಹ್ಮದ್ ಬಾಷಾ ತಂಙಳ್, ಕಮಿಟಿ ಸದಸ್ಯರಾದ ಅದ್ದು ಹಾಜಿ, ಉಪಾಧ್ಯಕ್ಷ ಕೆ. ಅಶ್ರಫ್, ಸದಸ್ಯರಾದ ಮುಹಮ್ಮದ್ ಅಶಫ್, ಸಮದ್ ಹಾಜಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯ ಎಲ್ಲಾ ಮಸೀದಿಗಳಲ್ಲೂ ವಿಶೇಷನಮಾಝ್ನೊಂದಿಗೆ ಮುಸ್ಲಿಂ ಬಾಂಧವರು ಬಕ್ರೀದ್ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ.