ಜಿಂಕೆ ಕೊಂಬು ಮಾರಾಟ: ನಾಲ್ವರು ಆರೋಪಿಗಳ ಬಂಧನ
ಮಂಗಳೂರು, ಆ.22: ದ.ಕ. ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇ ಗೌಡ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಪೊಲಿಸರು ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿ, ಎರಡು ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಸಾಗಾಟಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಂಡಿದ್ದು, ಕಾರ್ಯಾಚರಣೆ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಮಂಗಳವಾರ ಪುತ್ತೂರು ನಗರ ಠಾಣಾ ಪೊಲಿಸ್ ಇನ್ಸಪೆಕ್ಟರ್ ಮಹೇಶ್ ಪ್ರಸಾದ ಹಾಗೂ ಉಪ್ಪಿನಂಗಡಿ ಪಿ ಎಸ್ ಐ ನಂದಕುಮಾರ ಇವರು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಲಿನೆಟ್ ಬೈಪಾಸ್ ಬಳಿ ಮಾರುತಿ ಝೆನ್ ಕಾರನ್ನು ತಪಾಸಣೆ ಮಾಡಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೋಡಿಂಬಾಳ ಗ್ರಾಮದ ಕಜೆಮೂಲೆ ನಿವಾಸಿ ಶೈಜು (26 ವರ್ಷ), ಕುಟ್ರುಪ್ಪಾಡಿ ಗ್ರಾಮದ ಅಲರಾಮೆ ನಿವಾಸಿ ಸಜಿ .ಎ . ಕೆ (40), ಕಾರ್ಕಳ ಅಜೆಕಾರು ಗ್ರಾಮದ ಸಂದೀಪ (29) ಹಾಗೂ
ಕುಟ್ರುಪ್ಪಾಡಿ ಗ್ರಾಮದ ಮಿನಾಡಿಯ ಸಜೀತ್ ಅಬ್ರಾಹಂ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ವೇಳೆ ರಜಿಂತ್ ಕೋಡಿಂಬಾಳ ಎಂಬ ವ್ಯಕ್ತಿಯು ಪರಾರಿಯಾಗಿದ್ದಾನೆ. ಆರೋಪಿಗಳು ಜಿಂಕೆ ಕೊಂಬನ್ನು ಕಾರ್ಕಳದ ಅಜೆಕಾರು ಎಂಬಲ್ಲಿಂದ ಪುತ್ತೂರು ನಗರಕ್ಕೆ ಮಾರಾಟ ಮಾಡುವ ಉದ್ದೇಶಕ್ಕಾಗಿ ಸಾಗಿಸುತ್ತಿದ್ದರು. ಅಕ್ರಮ ಸಾಗಾಟದ ಮಾಹಿತಿ ತಿಳಿದ ಉಪ್ಪಿನಂಗಡಿ ಪಿಎಸ್ ಐ ಮತ್ತು ಸಿಬ್ಬಂದಿ ಉಪ್ಪಿನಂಗಡಿಯಲ್ಲಿ ವಾಹನವನ್ನು ತಡೆದು ನಿಲ್ಲಿಸಿದರು. ಆಗ ಆರೋಪಿಗಳು ವಾಹನವನ್ನು ಪುತ್ತೂರು ಕಡೆಗೆ ಚಲಾಯಿಸಿದ್ದು ಪುತ್ತೂರು ನಗರ ಪೊಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ಪುತ್ತೂರು ನಗರ ಪೊಲಿಸ್ ನಿರೀಕ್ಷಕರಾದ ಮಹೇಶ್ ಪ್ರಸಾದ ರವರು ತನಿಖೆ ನಡೆಸುತ್ತಿದ್ದಾರೆ . ಆಪಾದಿತರ ರುದ್ಧ ವನ್ಯ ಜೀ ಸಂರಕ್ಷಣಾ ಅಧಿನಿಯಮ 1972 ರಂತೆ ಪ್ರಕರಣ ದಾಖಲಾಗಿದೆ.