ಮಾದಕ ವಸ್ತು- ಪಿಸ್ತೂಲ್ನೊಂದಿಗೆ ಐವರ ದಸ್ತಗಿರಿ
ಮಂಗಳೂರು, ಆ.22: ನಗರದಲ್ಲಿ ಮಾದಕ ವಸ್ತು, 2 ಪಿಸ್ತೂಲ್, 22 ಮದ್ದುಗುಂಡು ಸಹಿತ 5 ಮಂದಿ ಕುಖ್ಯಾತ ಆರೋಪಿಗಳನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಆ.21ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ದಕ್ಷಿಣ ಉಪ ವಿಭಾಗ ಮತ್ತು ದಕ್ಷಿಣ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿದ್ದ ಸಮಯ, ಮಾದಕ ವಸ್ತುಗಳನ್ನು ಗಿರಾಕಿಗಳಿಗೆ ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಮಂಗಳೂರು ಕಡೆಯಿಂದ ಗುರುಪುರ ಸೇತುವೆ ಕಡೆಗೆ ತೆರಳುತ್ತಿದ್ದವರನ್ನು ಖಚಿತ ಮಾಹಿತಿ ಮೇರೆಗೆ ತಡೆದು ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರನ್ನು ಪರಾರಿ ಜಂಕ್ಷನ್ ಬಳಿ ತಡೆದ ಪೊಲೀಸರು, ಸಾಗಾಟಕ್ಕಾಗಿ ಉಪಯೋಗಿಸಿದ್ದ 7 ಲಕ್ಷ ರೂ. ಮೌಲ್ಯದ ಬಲೆನೋ ಕಾರು, 5,500 ರೂ. ಮೌಲ್ಯದ ಗಾಂಜಾದಿಂದ ತಯಾರಿಸಿದ 11 ಉಂಡೆಗಳು, 1.80 ಲಕ್ಷ ರೂ. ಮೌಲ್ಯದ 100 ಗ್ರಾಂ ಮಾದಕ ವಸ್ತು MDMA Crystal, 2 ಪಿಸ್ತೂಲ್, 1.15 ಲಕ್ಷ ರೂ. ಮೌಲ್ಯದ 22 ಮದ್ದು ಗುಂಡುಗಳು, 11 ಮೊಬೈಲ್ ಫೋನ್ಗಳು ಸೇರಿದಂತೆ ಒಟ್ಟು ಸುಮಾರು 11,45,190 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ವಿಚಾರಿಸಿದಾಗ ಈ ಮಾದಕ ವಸ್ತುಗಳನ್ನು ಮುಂಬೈಯಿಂದ ತಂದು ಕೇರಳ ಮತ್ತು ಇತರ ಕಡೆಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಬಂಧಿತರನ್ನು ಕಾಸರಗೋಡು ನಿವಾಸಿ ಟಿ.ಎಚ್. ರಿಯಾಝ್(38), ಬಂಟ್ವಾಳ ಸಾಲೆತ್ತೂರಿನ ಉಸ್ಮಾನ್ ರಫೀಕ್ ಯಾನೆ ತಲ್ಕಿ ರಫೀಕ್ (29), ಕಾಸರಗೋಡಿನ ಅಬ್ದುಲ್ ರವೂಫ್(30), ಇಮ್ತಿಯಾಝ್ ಅಹಮ್ಮದ್ ಹಾಗೂ ವಿಟ್ಲದ ಹಜ್ವರ್ ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಟಿ.ಎಚ್.ರಿಯಾಝ್ ಎಂಬವನು ಕೇರಳ ರಾಜ್ಯದಲ್ಲಿ ಕುಖ್ಯಾತ ಆರೋಪಿತನಾಗಿದ್ದು, ಈತನ ವಿರುದ್ದ ಸುಮಾರು 40 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದು ಬಂದಿದೆ. ಈತ ಮುಂಬೈನಿಂದ ಮಾದಕ ವಸ್ತುವನ್ನು ತಂದು ಮಾರಾಟ ಮಾಡುವ ಪ್ರಮುಖ ಆರೋಪಿಯಾಗಿದ್ದು, ಕೇರಳದ ಪಯಂಗಡಿ ಮತ್ತು ಬೇಕಲ ಠಾಣೆಗಳಲ್ಲಿ ವಾರಂಟು ಹೊಂದಿರುತ್ತಾನೆ.
ಉಸ್ಮಾನ್ ರಫೀಕ್ ಯಾನೆ ತಲ್ಕಿ ರಫೀಕ್ ಸಹ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಸುಮಾರು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಕೇರಳದ ಮಂಜೇಶ್ವರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಈತನ ಮೇಲೆ ಬೆಂಗಳೂರು ಸಂಜಯನಗರ ಠಾಣೆಯಲ್ಲಿ ಸುಮಾರು 4 ತಿಂಗಳ ಹಿಂದೆ ಅನಧಿಕೃತ ಪಿಸ್ತೂಲ್ ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ.
ಅಬ್ದುಲ್ ರವೂಫ್ ನಿಂದ ಒಂದು ನಾಡ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈತನು ಟಿ.ಹೆಚ್. ರಿಯಾಝ್ ನ ಮಾದಕ ವಸ್ತು ಮಾರಾಟ ಜಾಲದ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ. ಇಮ್ತಿಯಾಝ್ ವಿರುದ್ಧ ಕೇರಳ ಮಂಜೇಶ್ವರ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಹಜ್ವರ್ ಈತನು ಉಸ್ಮಾನ್ ರಫೀಕ್ ನ ಸಹಚರ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.