ಮಲ್ಪೆ: ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕರಿಬ್ಬರು ಮೃತ್ಯು
ಮಲ್ಪೆ, ಆ.22: ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಅರಿಯದೇ ಸ್ಪರ್ಶಿಸಿದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಬುಧವಾರ ಅಪರಾಹ್ನ ಹೂಡೆ ಸಮೀಪದ ಪರಂಗಿಕುದ್ರು ಎಂಬಲ್ಲಿ ನಡೆದಿದೆ.
ಮೃತ ಯುವಕರನ್ನು ಪಡುಕುದ್ರುವಿನ ನಿವಾಸಿ ಕೃಷ್ಣ ಕಾಂಚನ್ ಎಂಬವರ ಪುತ್ರ ಕೀರ್ತನ್ (21) ಹಾಗೂ ಬಾಳಿಗರಕುದ್ರುವಿನ ಸಂಜೀವ ಅವರ ಪುತ್ರ ರಾಕೇಶ್ (27) ಎಂದು ಗುರುತಿಸಲಾಗಿದೆ.
ಪರಂಗಿಕುದ್ರುಗೆ ಇವರಿಬ್ಬರು ಮೀನು ಹಿಡಿಯಲು ಹೋಗಿದ್ದರೆಂದು ಹೇಳಲಾಗಿದೆ. ಇವರಿಬ್ಬರ ಕೂಗು ಕೇಳಿ ಸ್ವಲ್ಪ ದೂರದಲ್ಲಿದ್ದವರು ಬಂದು ನೋಡುವಾಗ ಇಬ್ಬರೂ ಮೃತಪಟ್ಟಿದ್ದರು.
ಕೀರ್ತನ್ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಯಾಗಿದ್ದರೆ, ರಾಕೇಶ್ ಕೂಲಿಕಾರ್ಮಿಕರಾಗಿ ದುಡಿಯುತಿದ್ದರು. ರಜಾ ದಿನವಾದ ಕಾರಣ ಇಬ್ಬರೂ ಮೀನು ಹಿಡಿಯಲು ಹೋಗಿದ್ದು, ಈ ವೇಳೆ ಎರಡು ಕುದ್ರುಗಳ ನಡುವೆ ಎಳೆಯಲಾಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೇ ದೂರ ಸರಿಸಲು ಕೈಯಲ್ಲಿ ಮುಟ್ಟಿರಬೇಕೆಂದು ಶಂಕಿಸಲಾಗಿದೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.