ಮಲ್ಪೆ: ದೋಣಿಗೆ ಅಲೆ ಬಡಿದು ಮೀನುಗಾರ ಮೃತ್ಯು
ಮಲ್ಪೆ, ಆ.22: ಮಲ್ಪೆ ಬಂದರಿನ ಸಮುದ್ರದಿಂದ ಆರು ಮಾರು ದೂರದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಬಲೆ ಹಾಕುವಾಗ ದೋಣಿಗೆ ಅಲೆ ಬಡಿದ ಪರಿಣಾಮ ಓರ್ವ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಬುಧವಾರ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಪಿತ್ರೋಡಿ ನಿವಾಸಿ ಬಾಲಕೃಷ್ಣ (46) ಎಂದು ಗುರುತಿಸಲಾಗಿದೆ.
ಆ. 20ರಂದು ಕೊಡವೂರು ಗ್ರಾಮದ ಮಲ್ಪೆ ಬಂದರಿನಿಂದ ಜನನಿ ದೋಣಿಯಲ್ಲಿ ಬೆಳಗ್ಗೆ 6 ಗಂಟೆಗೆ 5 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಬಂದರಿನಿಂದ ಆರು ಮಾರು ದೂರ ಹೋದ ವೇಳೆ ದೋಣಿಯಲ್ಲಿದ್ದ ಬಾಲಕೃಷ್ಣ ಮೀನಿಗೆ ಬಲೆ ಹಾಕುವಾಗ ಸಮುದ್ರದ ಅಲೆ ದೋಣಿಗೆ ಬಡಿದ ಪರಿಣಾಮ ಬಾಲಕೃಷ್ಣ ನೀರಿಗೆ ಬಿದ್ದು ಕಾಣೆಯಾಗಿದ್ದರು. ಈ ಸಂದರ್ಭ ಸಾಕಷ್ಟು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಸಮುದ್ರದಲ್ಲಿ ಬಾಲಕೃಷ್ಣ ಮೃತದೇಹ ಪತ್ತೆಯಾಗಿದ್ದು, ನಂತರ ಕೋಡಿಬೆಂಗ್ರೆ ಸಮುದ್ರ ಕಿನಾರೆಗೆ ಮೃತದೇಹವನ್ನು ತರಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story