ಪ್ರಕೃತಿ ವಿಕೋಪ: ನಿರ್ವಸಿತರಿಗೆ ವಸತಿ ಸೌಕರ್ಯ ಒದಗಿಲು ಆದ್ಯತೆ- ಸಚಿವ ಯು.ಟಿ. ಖಾದರ್
ಮಂಗಳೂರು, ಆ. 22: ಮಹಾ ಮಳೆಯಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ನಿರ್ವಸಿತರಾದ ಕುಟುಂಬಗಳಿಗೆ ವಸತಿ ಸೌಕರ್ಯ ಕಲ್ಪಿಸಲು ಸರಕಾರ ಆದ್ಯತೆ ನೀಡಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಲು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಶನಿನ ಆಯುಕ್ತ ಅನುಪ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಅನುಪ್ ಕುಮಾರ್ ಅವರು ಬುಧವಾರ ಮಂಗಳೂರಿಗೆ ಆಗಮಿಸಿ ದ.ಕ. ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಬಳಿಕ ಮಳೆ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮನೆ ಮತ್ತು ಆಸ್ತಿ ಪಾಸ್ತಿ ಕಳೆದುಕೊಂಡವರ ಬಗ್ಗೆ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಅವರು ಬುಧವಾರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಶುಕ್ರವಾರ ಕಾರ್ಪೊರೇಶನಿನ ಎಜಿಎಂ ಉಸ್ಮಾನ್ ಪಾಶಾ ಅವರು ಆಗಮಿಸಲಿದ್ದು ಸ್ಥಳ ಸಮೀಕ್ಷೆ ನಡೆಸುವರು. ಆ ಬಳಿಕ ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ವಸಿತರಿಗೆ ಮನೆ ಕಟ್ಟಿಸಿಕೊಡುವ ಯೋಜನೆಗೆ ಅಂತಿಮ ರೂಪ ನೀಡಲಾಗುವುದು ಎಂದರು.
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಹಲವಾರು ಕುಟುಂಬಗಳು ನಿರಾಶ್ರಿತವಾಗಿವೆ. ಅವರಿಗೆ ಆಶ್ರಯ ಕಲ್ಪಿಸಿಕೊಡಲು ರಾಜ್ಯ ಸರಕಾರ ಬದ್ಧವಾಗಿದೆ. ನಿರಾಶ್ರಿತರ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದಂತೆ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಹಣದ ಕೊರತೆಯಿಲ್ಲ: ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಸರಕಾರ ಉತ್ತಮ ವ್ಯವಸ್ಥೆ ಕಲ್ಪಿಸಲಿದ್ದು, ಇದಕ್ಕೆ ಯಾವುದೇ ಹಣದ ಕೊರತೆಯಿಲ್ಲ ಎಂದರು.
ಸಾರ್ವಜನಿಕವಾಗಿ ಹಣ ಸಂಗ್ರಹ ಬೇಡ: ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದವರ ಸಂಕಷ್ಟಕ್ಕೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸರಕಾರದಿಂದಲೂ ಹೆಚ್ಚಿನ ಸಹಕಾರ ನೀಡಲಾಗುತ್ತಿದೆ. ಆದರೆ ಇದೇ ಕಾರಣ ಮುಂದಿಟ್ಟು ಸಾರ್ವಜನಿಕವಾಗಿ ರಸ್ತೆಯಲ್ಲಿ ಹಣ ಸಂಗ್ರಹಿಸುವುದು ಸರಿಯಲ್ಲ ಎಂದ ಸಚಿವ ಯು.ಟಿ. ಖಾದರ್ ಸಂಘ-ಸಂಸ್ಥೆಗಳು ಅಥವಾ ವೈಯಕ್ತಿಕವಾಗಿ ಯಾರು ಬೇಕಾದರೂ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ಹಣ ನೀಡ ಬಹುದು ಎಂದರು. ಸಾರ್ವಜನಿಕವಾಗಿ ದೇಣಿಗೆ ಸಂಗ್ರಹಿಸುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ನಿರಾಶ್ರಿತರ ಹೆಸರಿನಲ್ಲಿ ಈ ರೀತಿ ಹಣ ಸಂಗ್ರಹ ಮಾಡುವುದು ನಿರಾಶ್ರಿತರ ಮನಸ್ಸಿಗೂ ಬೇಸರ ತರಿಸುವ ಸಂಗತಿಯಾಗಿದೆ ಎಂದರು.
ದ.ಕ. ಜಿಲ್ಲೆಯ ಕಲ್ಮಕಾರಿನಲ್ಲಿ ಹಲವು ಸೇತುವೆಗಳು ಕುಸಿತಗೊಂಡಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಕೆಲವು ಸಮಯ ತಗಲಬಹುದು. ಆದ್ದರಿಂದ ತಾತ್ಕಾಲಿಕ ಸೇತುವೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಒದಗಿಸಿ ಜನಸಂಚಾರಕ್ಕೆ ಅನುವು ಮಾಡಿ ಕೊಡಲಾಗುವುದು. ದಕ್ಷಿಣ ಕನ್ನಡ ಮತ್ತು ಮಡಿಕೇರಿ ಸಂಪರ್ಕಕ್ಕೆ ಸ್ಥಳೀಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಳೆ ನಿಂತ ಕೂಡಲೇ ರಸ್ತೆಗಳ ಮಣ್ಣು ತೆಗೆದು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುವುದು. ಶೀಘ್ರದಲ್ಲೇ ಭಾಗಮಂಡಲ ರಸ್ತೆಯನ್ನು ದುರಸ್ತಿ ಮಾಡಿ ಮಡಿಕೇರಿ ಸಂಚಾರಕ್ಕೆ ಅನುಕೂಲ ಲ್ಪಿಸಲಾಗುವುದು ಎಂದು ತಿಳಿಸಿದರು.
ಮಹಾ ಮಳೆಯಿಂದ ಕೇರಳದ ಡಿವೈನ್ ರೀಟ್ರೀಟ್ ಸೆಂಟರ್ನಲ್ಲಿ ಸಿಲುಕಿದ್ದ 1500ಕ್ಕೂ ಅಧಿಕ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರಕಾರ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಎಲ್ಲರೂ ಮರಳಿ ಕನ್ನಡ ನಾಡಿಗೆ ಆಗಮಿಸಿದ್ದಾರೆ. ಇದಕ್ಕೆ ಶ್ರಮಿಸಿದ ರಾಜ್ಯ ಕೆಎಸ್ಸಾರ್ಟಿಸಿ ವಿಭಾಗದ ಅಧಿಕಾರಿಗಳು ಮತ್ತು ಕೇರಳದ ಅಧಿಕಾರಿಗಳಿಗೆ ವಂದನೆ ಸಲ್ಲಿಸುತ್ತೇನೆ ಎಂದರು.
ಇಸ್ರೋದಿಂದ ಅಧ್ಯಯನ: ಪ್ರಕೃಋತಿ ವಿಕೋಪದಿಂದ ಕೊಡಗು, ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಈ ಬಗ್ಗೆ ಜಿಯೋಗ್ರಫಿಕಲ್ ಸರ್ವೇ ಆ್ ಇಂಡಿಯಾ ಸಮೀಕ್ಷೆ ನಡೆಸುತ್ತಿದೆ. ಇದು ಮಾತ್ರವಲ್ಲದೆ ಇಸ್ರೋ ತಂಡ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಇಸ್ರೋ ಭೂಗರ್ಭಶಾಸ ವಿಭಾಗದ ಮಾರುತಿ ರೆಡ್ಡಿ, ಪ್ರಕಾಶ್, ಶ್ರೀನಿವಾಸ್ ರೆಡ್ಡಿ ಭೂಕುಸಿತ ಒಳಗಾದ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಸಚಿವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಮಮತಾ ಡಿ.ಎಸ್. ಗಟ್ಟಿ, ಈಶ್ವರ್ ಉಳ್ಳಾಲ್, ಸುರೇಶ್ ಭಟ್ನಾಗರ್, ರಮೇಶ್ ಶೆಟ್ಟಿ, ಸದಾಶಿವ ಉಳ್ಳಾಲ್, ಪಿಯೂಸ್ ಮೊಂತೇರೋ, ಪ್ರಕಾಶ್ ತುಂಬೆ ಉಪಸ್ಥಿತರಿದ್ದರು.