ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ
ಬಂಟ್ವಾಳ, ಆ. 22: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿನ್ನಾಭರಣವನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಆತನಿಂದ 134 ಗ್ರಾಂ ಬಂಗಾರವನ್ನು ವಶಕ್ಕೆ ಪಡೆದುಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.
ಇಲ್ಲಿನ ನಿವಾಸಿ ಪ್ರಶಾಂತ್ ಪೂಜಾರಿ (32) ಬಂಧಿತ ಆರೋಪಿ. ಕಳೆದ ನಾಲ್ಕು ವರ್ಷದಿಂದ ಅಬ್ಬೆಟ್ಟು ಪರಿಸರದ ಮನೆಗಳಲ್ಲಿ ಮನೆಮಂದಿ ಆಶ್ಚರ್ಯ ಪಡುವ ರೀತಿಯಲ್ಲಿ ಈತ ಕಳವು ನಡೆಸುತ್ತಿದ್ದ. ಮನೆಮಂದಿಗೆ ಪರಿಚಿತನಾಗಿದ್ದುಕೊಂಡೇ ಅವರ್ಯಾರು ಮನೆಯಲ್ಲಿ ಇಲ್ಲದೇ ಇದ್ದ ವೇಳೆಯಲ್ಲಿ ಕನ್ನ ಹಾಕಿ ಚಿನ್ನಾಭರಣ ಲಪಟಾಯಿಸುತ್ತಿದ್ದ. ಮನೆಯವರು ಮನೆಬಿಟ್ಟು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅಥವಾ ನೆಂಟರ ಮನೆಗೆ ಬೀಗ ಹಾಕಿ ಹೋಗುವ ಸಂದರ್ಭದಲ್ಲಿ ಬೀಗದ ಕೀಯನ್ನು ಬಚ್ಚಿಡುವ ಸ್ಥಳವನ್ನು ನೋಡಿ ಅದೇ ಕೀಯಲಿ ಬೀಗ ತೆರೆದು ಚಿನ್ನಾಭರಣವನ್ನು ಕಳವು ನಡೆಸಿ ಕೀಯನ್ನು ಅದೇ ಜಾಗದಲ್ಲಿಟ್ಟು ಯಾರಿಗೂ ಸಂಶಯ ಬಾರದಂತೆ ಜಾಣತನದಿಂದ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಣಾಗದ ಎಎಸ್ಪಿ ಹೃಷಿಕೇಶ್ ಸೋನಾವಣೆ ನೇತೃವದಲ್ಲಿ ಸಿಐ ಸಿ.ಡಿ. ನಾಗರಾಜ್, ಎಸೈ ಪ್ರಸನ್ನ, ಎಎಸೈ ರತ್ನಕುಮಾರ್, ಜನಾರ್ದನ, ಸುರೇಶ್, ಜಯರಾಮ್, ಮನೋಜ್, ರಾಧಕೃಷ್ಣ, ನಝೀರ್, ಚಾಲಕ ಕಿರಣ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.