ನೆರೆಪೀಡಿತ ಕೇರಳ, ಕೊಡಗು ಜಿಲ್ಲೆಗೆ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ವೈದ್ಯರ ತಂಡ ರವಾನೆ
ಮಂಗಳೂರು, ಆ.23: ಮಳೆ ಮತ್ತು ನೆರೆ ಹಾವಳಿಗೆ ತುತ್ತಾಗಿ ಕಂಗಾಲಾಗಿರುವ ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ಸಂತ್ರಸ್ತ ಜನರಿಗೆ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ (ಎಫ್ಎಂಸಿಐ) ಯು ಗುರುವಾರ ವೈದ್ಯರು, ನರ್ಸ್ಗಳು ಮತ್ತು ಸಹಾಯಕರ ತಂಡವನ್ನು ರವಾನಿಸಿದೆ.
35 ಸದಸ್ಯರ ತಂಡವನ್ನು ಗುರುವಾರ ಫಾ. ಪೀಟರ್ ಸಲ್ದಾನಾ ಅವರ ಆಶೀರ್ವಾದದೊಂದಿಗೆ ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಯಿತು. ಈ ವೇಳೆ ಮಾತನಾಡಿದ ಅವರು, ಕೇರಳ ಮತ್ತು ಕೊಡಗಿನಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ದಿನಕಳೆಯುತ್ತಿದ್ದಾರೆ. ಅವರಿಗೆ ವೈದ್ಯಕೀಯ ನೆರವನ್ನು ನೀಡುವ ಉದ್ದೇಶದಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ಮುಂದಾಗಿರುವುದು ಸ್ವಾಗತಾರ್ಹ. ಕಮ್ಫರ್ಟ್ ಆ್ಯಂಡ್ ಹೀಲ್ ಘೋಷ ವಾಕ್ಯದಲ್ಲಿ ನಂಬಿಕೆಯಿಟ್ಟಿರುವ ಫಾದರ್ ಮುಲ್ಲರ್ ಸಂಸ್ಥೆ ಈ ಹಿಂದೆಯೂ ಅನೇಕ ಮಾನವೀಯ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಫಾ. ಪೀಟರ್ ಸಲ್ದಾನಾ ತಿಳಿಸಿದ್ದಾರೆ.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಫಾದರ್ ಮುಲ್ಲರ್ ಹೋಮಿಯೊಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದೊಂದಿಗೆ ಮುಲ್ಲರ್ ಕೇರ್ ಎಂಬ ಅಭಿಯಾನದಡಿ ನೆರೆಪೀಡಿತ ಪ್ರದೇಶಗಳಿಗೆ ನುರಿತ ವೈದ್ಯಕೀಯ ತಂಡವನ್ನು ರವಾನಿಸಿದೆ.