ಹಿದಾಯ ಫೌಂಡೇಶನ್ ನ 'ಬಿ-ಹ್ಯೂಮನ್' ವತಿಯಿಂದ ಪರಿಹಾರ ಸಾಮಗ್ರಿಗಳ 2ನೇ ಟ್ರಕ್ ರವಾನೆ
ಕೇರಳ, ಕೊಡಗು ಪ್ರವಾಹ
ಮಂಗಳೂರು, ಆ.24: ಹಿದಾಯ ಫೌಂಡೇಶನ್ ನ ಬಿ-ಹ್ಯೂಮನ್ ವತಿಯಿಂದ ನೆರೆ ಪೀಡಿತ ಕೇರಳಕ್ಕೆ ಪರಿಹಾರ ಸಾಮಗ್ರಿಗಳನ್ನು ಹೊತ್ತ ಎರಡನೇ ವಾಹನವನ್ನು ರವಾನಿಸಲಾಯಿತು.
ಈ ಸಾಮಗ್ರಿಗಳನ್ನು ಕೇರಳ ಮತ್ತು ಕೊಡಗಿನಲ್ಲಿ ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರಾಗಿರುವ ಜನರಿಗೆ ಹಂಚಲು ಅಝಿ ಅಂತಾರಾಷ್ಟ್ರೀಯ ಸಮೂಹ ಕೊಚ್ಚಿನ್ಗೆ ಹಸ್ತಾಂತರಿಸಲಾಗುವುದು. ಬಿಸ್ಕೆಟ್ಗಳು, ಚಹಾಪುಡಿ, ಸಕ್ಕರೆ, ಗೋಧಿ ಹುಡಿ, ಎಣ್ಣೆ, 250 ಅಕ್ಕಿ ಪ್ಯಾಕೆಟ್, 500 ಲುಂಗಿ, ಸೀರೆಗಳು, ಮಕ್ಕಳ ಬಟ್ಟೆಗಳು, 500 ಹೊದಿಕೆಗಳು, 350 ಶಾಲ್ಗಳು, ಔಷಧಿ, ಶಸ್ತ್ರಚಿಕಿತ್ಸೆಯ ಪರಿಕರಗಳು, ಶುಚಿತ್ವದ ವಸ್ತುಗಳು ಇತ್ಯಾದಿಗಳನ್ನು ಈ ವಾಹನದಲ್ಲಿ ಕಳುಹಿಸಿಕೊಡಲಾಗಿದೆ.
ರಾತ್ರಿಯ ಪ್ರಾರ್ಥನೆಯ ನಂತರ ಮಂಗಳೂರಿನ ಕಂಕನಾಡಿಯ ಕ್ಲಾಸಿಕ್ ಹಾರ್ಮೊನಿಯಿಂದ ಎರಡನೇ ಟ್ರಕ್ ಅನ್ನು ಕಳುಹಿಸಿಕೊಡಲಾಯಿತು. ಈ ವೇಳೆ ಬಿ-ಹ್ಯೂಮನ್ ಸಂಸ್ಥಾಪಕ ಆಸಿಫ್ ಡೀಲ್ಸ್, ಕಣ್ಣೂರು ಜಿಲ್ಲೆಯ ಮಾಜಿ ಶಾಸಕ ಅಬ್ದುಲ್ಲಾ ಕುಟ್ಟಿ, ಫೈಝಲ್ ಯು.ಕೆ, ಉಮರ್ ಫಾರೂಕ್ ವಿಶ್ವಾಸ್ ಶಟರ್ಸ್, ರಫೀಕ್ ನಟ್ಟಿ ಅರಬ್ಸಿಕ್ ಕೆಫೆ ಹಾಗೂ ಸಲೀಂ ಸೂಫಿಕಾನ್, ಶಿಯಾಝ್ ಡೀಲ್ಸ್, ನಾಗರಾಜ್, ಪ್ರದೀಪ್ ಕೊಟ್ಟಾರಿ ಹಾಗೂ ಅಹ್ನಫ್ ಡೀಲ್ಸ್ ಹಾಗೂ ಇತರರು ಉಪಸ್ಥಿತರಿದ್ದರು.