ಉಡುಪಿ: ಬಿಜೆಪಿಯ ನಗರಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಮಣಿಪಾಲ, ಆ.24: ಮುಂದಿನ ಶುಕ್ರವಾರ ನಡೆಯಲಿರುವ ಉಡುಪಿ ನಗರಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ರಾಜ್ಯ ವಿಧಾನಪರಿಷತ್ನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಮಣಿಪಾಲದ ಹೊಟೇಲ್ ಕಂಟ್ರಿ ಇನ್ನಲ್ಲಿ ಬಿಡುಗಡೆ ಗೊಳಿಸಿದರು.
ಇದೇ ಸಂದರ್ಭದಲ್ಲಿ ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ ವೈಫಲ್ಯ ಹಾಗೂ ಬಿಜೆಪಿಯ ಸಾಧನೆಯ ಕಿರುಹೊತ್ತಗೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಬಿಡುಗಡೆಗೊಳಿಸಿದರು.
ಈ ಬಾರಿ ಪಕ್ಷ ತನ್ನಿಂದ ಈಡೇರಿಸಲು ಸಾಧ್ಯವಾಗುವ ಹಾಗೂ ಅನುಷ್ಠಾನ ಗೊಳಿಸಬಹುದಾದ ಭರವಸೆಗಳನ್ನು ಮಾತ್ರ ಜನರ ಮುಂದಿಡುತ್ತಿದೆ. ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ನೀಡಿರುವ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಉಡುಪಿ ನಗರಸಭೆಗೆ ಬಿಜೆಪಿಯಿಂದ ಮಾತ್ರ ಒಳ್ಳೆಯ ಆಡಳಿತ ನೀಡಲು ಸಾಧ್ಯವಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಈ ಬಾರಿಯೂ ನಾವು ಒಳ್ಳೆಯ ಜನಪರವಾದ ಆಡಳಿತದ ಭರವಸೆಯನ್ನು ನೀಡುತ್ತೇವೆ. ಹಾಲಿ ಮೂವರು ಹಾಲಿ ಸದಸ್ಯರನ್ನು ಹೊರತು ಪಡಿಸಿದರೆ ಉಳಿದಂತೆ ಹೊಸ ಮುಖಗಳನ್ನೇ ಕಣಕ್ಕಿಳಿಸಿದ್ದು, ಬಿಜೆಪಿಯಲ್ಲಿರುವ ಅನುಭವಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರ ಮಾರ್ಗದರ್ಶನದಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತೇವೆ ಎಂದು ಅವರು ನುಡಿದರು.
ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ನಾಳೆ ಬೆಳಗ್ಗೆ 10ಕ್ಕೆ ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಮೆರವಣಿಗೆಯಲ್ಲಿ ಬರಲಿದೆ. 11ಕ್ಕೆ ಉಡುಪಿ ಚಿತ್ತರಂಜನ್ ಸರ್ಕಲ್ನಲ್ಲಿ 12ಕ್ಕೆ ಕಾಪು ಬಸ್ನಿಲ್ದಾಣದ ಬಳಿ ಸಾರ್ವಜನಿಕರಿಗೆ ಶೃದ್ದಾಂಜಲಿ ಅರ್ಪಿಸಲು ಅವಕಾಶ ನೀಡಲಾಗುವುದು. ಅಪರಾಹ್ನ 1:00 ಗಂಟೆಗೆ ಮುಲ್ಕಿ ತಲುಪುವ ಚಿತಾಭಸ್ಮದ ಮೆರವಣಿಗೆ ದಕ್ಷಿಣ ಕನ್ನಡದಲ್ಲಿ ಸಂಚರಿಸಿ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ನಾಯಕರಾದ ಪ್ರಭಾಕರ ಪೂಜಾರಿ, ಯಶ್ಪಾಲ್ ಸುವರ್ಣ, ದಿನಕರ ಶೆಟ್ಟಿ ಹೆರ್ಗ, ಕುತ್ಯಾರು ನವೀನ್ ಶೆಟ್ಟಿ, ಮನೋಹರ ಕಲ್ಮಾಡಿ, ಮಹೇಶ್ ಠಾಕೂರ್ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಪ್ರಣಾಳಿಕೆ ಮುಖ್ಯಾಂಶಗಳು
*ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಅವಧಿಯಲ್ಲಿ ಗಗನ ಕ್ಕೇರಿರುವ ಉದ್ಯಮ ಪರವಾನಿಗೆ ಶುಲ್ಕವನ್ನು ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ 500ರೂ. ಮೀರದಂತೆ ನಿಗದಿಗೊಳಿಸಿ ಜನರ ಶೋಷಣೆಯನ್ನು ಕೊನೆಗೊಳಿಸಲಾಗುವುದು.
*ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಂಪೂರ್ಣ ವೈಫಲ್ಯ ಕಂಡ ದಾರಿದೀಪದ ವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸಿ, ನಿರ್ವಹಣೆಯನ್ನು ಸಮರ್ಪಕ ಗೊಳಿಸಲಾಗುವುದು. ಈ ಮೂಲಕ ವಾರ್ಡುಗಳನ್ನು ಕತ್ತಲೆಯಿಂದ ಮುಕ್ತಗೊಳಿಸ ಲಾಗುವುದು.
*ಈಗಿರುವ ಒಳಚರಂಡಿ ಹಾಗೂ ಡ್ರೈನೇಜ್ಗಳನ್ನು ಉಳಿದಿರುವ 36 ಕೋಟಿ ರೂ.ಗಳಲ್ಲಿ ಮ್ಯಾನ್ಹೋಲ್ಗಳನ್ನು ಸೋರಿಕೆ ಇಲ್ಲದ ಮ್ಯಾನ್ಹೋಲ್ಗಳಾಗಿ ಬದಲಿಸಿ, ಕಾಂಕ್ರಿಟ್ ವೆಟ್ವೆಲ್ಗಳಾಗಿ ಮೇಲ್ದರ್ಜೆ ಗೇರಿಸಲಾಗುವುದು.ಮಣಿಪಾಲ, ಮಲ್ಪೆ ಹಾಗೂ ಸಂತೆಕಟ್ಟೆಗಳವರೆಗೆ ಇದನ್ನು ವಿಸ್ತರಿಸಲು ಸರಕಾರದಿಂದ ವಿಶೇಷ ಅನುದಾನ ತಂದು ಒಳಚರಂಡಿ ವ್ಯವಸ್ಥೆ ಯನ್ನು ಸಮರ್ಪಕಗೊಳಿಸಲಾಗುವುದು.
*ಕುಡಿಯುವ ನೀರಿನ ಸಮರ್ಪಕ ಸರಬರಾಜಿಗಾಗಿ ಕೇಂದ್ರ ಸರಕಾರದ ಅಮೃತ ಯೋಜನೆಯಡಿ ಹಾಗೂ ಎಡಿಬಿ ಯೋಜನೆಗಳ ಮೂಲಕ ವಾರಾಹಿ ಯಿಂದ ನೀರು ತರುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸ ಲಾಗುವುದು. 2013ರವರೆಗೆ ಬಿಜೆಪಿ ಆಡಳಿತವಿದ್ದಾಗ ಇದ್ದಂತೆ ದಿನದ 24 ಗಂಟೆಯೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು.
*ಇನ್ನು ತ್ಯಾಜ್ಯ ನಿರ್ವಹಣೆಯನ್ನು ಮತ್ತೆ ವ್ಯವಸ್ಥಿತಗೊಳಿಸಲಾಗುವುದು. ಕರ್ವಾಲು ಕಸ ಸಂಗ್ರಹಣಾ ಘಟಕವನ್ನು ಮೇಲ್ದರ್ಜೆಗೇರಿಸಿ, ಕಸದಿಂದ ವಿದ್ಯುತ್ ಉತ್ಪಾದನೆಗೆ ಘಟಕ ನಿರ್ಮಿಸಲಾಗುವುದು. ನಗರದ ಕಸ ವಿಲೇವಾರಿಗೆ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು.
*ಸಂಪೂರ್ಣ ನಿಂತಿರುವ ನಗರಸಭಾ ವ್ಯಾಪ್ತಿಯ ರಸ್ತೆ ಅಗಲೀಕರಣ, ಚತುಷ್ಪತ ರಸ್ತೆಗಳ ನಿರ್ಮಾಣವನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು. ನಗರ ದೊಳಗಿನ ವಿಶ್ವೇಶ್ವರಯ್ಯ ಮಾರುಕಟ್ಟೆ ಪ್ರಾಂಗಣವನ್ನು ಸುಸಜ್ಜಿತಗೊಳಿಸಲಾಗು ವುದು. ಮಹಿಳಾ ಮೀನು ಮಾರುಕಟ್ಟೆಯನ್ನು ವಿಸ್ತರಿಸಲಾಗುವುದು. ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳಿಗೆ ಆರೋಗ್ಯ ವಿಮಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು.
*ಉಡುಪಿ ನಗರಸಭೆಯಲ್ಲಿ ಭ್ರಷ್ಟಾಚಾರ ರಹಿತ, ಜನಸ್ನೇಹಿ, ಪಾರದರ್ಶಕ ಆಡಳಿತವನ್ನು ಮತ್ತೆ ನೀಡಲಾಗುವುದು.ಕೆರೆ ಕಟ್ಟೆಗಳ ಅಭಿವೃದ್ಧಿ, ನಗರದಲ್ಲಿ ಹಾಗೂ ಮಲ್ಪೆ, ಸಂತೆಕಟ್ಟೆ, ಮಣಿಪಾಲಗಳಲ್ಲಿ ಹೈಟೆಕ್ ಬಸ್ ನಿಲ್ದಾಣಗಳ ನಿರ್ಮಾಣ, ನಗರದ ಹೃದಯ ಭಾಗದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣದ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.