ಬ್ಯಾರಿ ಮಿನಿ ಕಥಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಮಂಗಳೂರು, ಆ.24: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧೀನದಲ್ಲಿ ಪ್ರಕಟಗೊಳ್ಳುತ್ತಿರುವ ‘ಬ್ಯಾರಿ ವಾರ್ತೆ’ ಆಯೋಜಿಸಿದ ಬ್ಯಾರಿ ಮಿನಿ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಶುಕ್ರವಾರ ನಗರದ ದಿ ಕ್ಯಾಂಪಸ್ ಕರಿಯರ್ ಅಕಾಡಮಿಯ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾರಿ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ಅಕಾಡಮಿಯೊಂದಿಗೆ ಬ್ಯಾರಿ ಸಂಘಟನೆಗಳೂ ಕೈ ಜೋಡಿಸಬೇಕಿದೆ. ಬ್ಯಾರಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘವು ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ಪೀಳಿಗೆಗೆ ಬ್ಯಾರಿ ಭಾಷೆಯನ್ನು ಬಳುವಳಿಯಾಗಿ ನೀಡುವಂತಹ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್ಮಾನ್ ಬ್ಯಾರಿ ಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳ ಅಗತ್ಯತೆ ಬಹಳಷ್ಟಿದೆ. ಯುವ ಜನತೆಯು ಬ್ಯಾರಿ ಭಾಷೆಯನ್ನು ಓದುವ ಮತ್ತು ಬ್ಯಾರಿ ಭಾಷೆಯಲ್ಲಿ ಬರೆಯುವ ಅಭಿರುಚಿ ಬೆಳೆಸಬೇಕು ಎಂದರು.
ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ. ವೈ. ಅಬ್ದುಲ್ ಹಮೀದ್ ಕುಕ್ಕಾಜೆ (ಪ್ರಥಮ), ಆಝಾದ್ ಕಂಡಿಗ (ದ್ವಿತೀಯ), ಬದ್ರುದ್ದೀನ್ ಕೂಳೂರು ಮತ್ತು ಸಾಲೆತ್ತೂರು ಅಬೂಬಕರ್ ಫೈಝಿ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಸ್ವಾಗತಿಸಿದರು. ಬ್ಯಾರಿ ವಾರ್ತೆ ಸಂಪಾದಕ ಮಂಡಳಿಯ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.