ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ
ಮಂಗಳೂರು, ಆ.24: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ವಂಚಿಸುತ್ತಿದ್ದ ಆರೋಪಿ ಕುಲವಿಂದರ್ ಕುಮಾರ್ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಾಂಡೇಶ್ವರ ನಿವಾಸಿ ಕಿರಣ್ ತಿಲಗೋಳ್ ಎಂಬವರು ಉದ್ಯೋಗದ ಹುಡುಕಾಟದಲ್ಲಿದ್ದು, 2017ರ ನ.30ರಂದು ಅವರ ಇಮೇಲ್ಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಸಂದೇಶ ಬಂದಿತ್ತು. ಈ ಬಗ್ಗೆ ಕಿರಣ್ ತಿಲಗೋಳ್ ಮೇಲ್ಗೆ ಸಂಪರ್ಕಿಸಿದಾಗ ಅವರು ಕೆನಡಾದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ಕಿರಣ್ ತಿಲಗೋಳ್ ಮತ್ತೆ 26 ಮಂದಿಗೆ ಉದ್ಯೋಗ ಬೇಕೆಂದು ಕೇಳಿದಾಗ ಅದಕ್ಕೂ ಅವರು ಒಪ್ಪಿದ್ದಾರೆ. ಈ ಬಗ್ಗೆ ಎಲ್ಲರ ಅರ್ಜಿ ಶುಲ್ಕ, ಲಿಮಾ ಶುಲ್ಕ ಹಾಗೂ ಇತರ ಶುಲ್ಕ ಸೇರಿಸಿ ಒಟ್ಟು 5,96,150 ರೂ. ನೆಟೆ ಮೂಲಕ ಸಲ್ಲಿಸಿದ್ದಾರೆ. ಆದರೆ ಆ ಬಳಿಕ ಕಿರಣ್ ತಿಲಗೋಳ್ ಅವರ ಯಾವ ಕರೆ, ಇಮೇಲ್ಗೂ ಸ್ಪಂದಿಸದೆ ಹಾಗೂ ಅವರಿಗೂ, ಸ್ನೇಹಿತರಿಗೆ ಕೆಲಸವನ್ನೂ ನೀಡದೆ ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಪ್ರಕರಣ ತನಿಖೆ ನಡೆಸುತ್ತಿದ್ದಾಗ ಈ ವಂಚನೆಯ ರೂವಾರಿ, ಆರೋಪಿ ಪಂಜಾಬ್ನ ವರ್ಲ್ಡ್ ಸ್ಟಾರ್ ಪ್ಲೇಸ್ಮೆಂಟ್ ಸರ್ವಿಸ್ ಹೆಸರಿನ ಸಂಸ್ಥೆಯ ಮಾಲಕ ನಾಗಿದ್ದು, ಆತನಿಗೆ ಶೋಧ ನಡೆಸುತ್ತಿದ್ದರು. ಈತ ಗೋವಾದ ಕಲ್ಲಂಗೋಟ್ ಪರಿಸರದಲ್ಲಿರುವುದಾಗಿ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಆ.21ರಂದು ಸೈಬರ್ ಠಾಣೆಯ ಎಎಸ್ಸೈ ಓಂದಾಸ್, ಎಚ್ಸಿ ವಿದೀಪ್ ಅವರೊಂದಿಗೆ ಆ.22ರಂದು ಗೋವಾಕ್ಕೆ ತಲುಪಿ ಕಲ್ಲಂಗೋಟ್ನ ಅಗೋಡಾ ಪೋರ್ಟ್ ಪರಿಸರದಲ್ಲಿ ಬಂಧಿಸಿದ್ದಾರೆ. ಈತ ಪ್ರವಾಸಿಗನಾಗಿ ಗೋವಾಕ್ಕೆ ಬಂದಿದ್ದ.
ಮಂಗಳೂರು ನಗರ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಸವಿತ್ರ ತೇಜ್ ಪಿ.ಡಿ., ಸಹಾಯಕ ಪೊಲೀಸ್ ಉಪನಿರೀಕ್ಷಕ ಓಂದಾಸ್ ಎಚ್ಸಿ ಮಾಯಾ, ಕಾನ್ಸ್ಟೇಬಲ್ ವಿಜಯ್ ಶೆಟ್ಟಿ, ಎಚ್ಸಿ ಮನೋಜ್, ಎಚ್ಜಿ ವಿದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.