ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಅವಕಾಶಗಳಿಗೆ ತೆರೆದುಕೊಳ್ಳಬೇಕು: ಪಿ.ಬಿ ಆಚಾರ್ಯ
ಆಳ್ವಾಸ್ ಸಂಸ್ಥೆಗೆ ನಾಗಾಲ್ಯಾಂಡ್ ರಾಜ್ಯಪಾಲರ ಭೇಟಿ
ಮೂಡುಬಿದಿರೆ, ಆ. 24: ಈಶಾನ್ಯ ಭಾಗದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆದ ನಂತರ ತಮ್ಮ ರಾಜ್ಯಕ್ಕೆ ತೆರಳಿ, ಅಲ್ಲಿನ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನಾಗಲ್ಯಾಂಡ್ ನ ರಾಜ್ಯಪಾಲ ಪಿ.ಬಿ ಆಚಾರ್ಯ ತಿಳಿಸಿದರು.
ಅವರು ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಅಭ್ಯಸಿಸುತ್ತಿರುವ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು.
ಬೃಹತ್ ನೈಸಗಿಕ ಸಂಪನ್ಮೂಲವನ್ನು ಹೊಂದಿರುವ ಈಶಾನ್ಯ ರಾಜ್ಯಗಳು, ಅಭಿವೃದ್ದಿಯಲ್ಲಿ ನಮ್ಮ ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಿರೀಕ್ಷಿತ ಬೆಳವಣಿಗೆ ಹೊಂದಿಲ್ಲ. ಆ ಹಿನ್ನಲೆಯಲ್ಲಿ ಈಶಾನ್ಯ ರಾಜ್ಯದ ಯುವ ಜನತೆ ಕಾರ್ಯಪ್ರವೃತ್ತರಾಗಿ, ತಮ್ಮ ರಾಜ್ಯಗಳನ್ನು ಭಾರತ ದೇಶದ ಭೂಪಾಟದಲ್ಲಿ ವಿಶಿಷ್ಟ ಸ್ಥಾನ ಲಭಿಸುವಲ್ಲಿ ಶ್ರಮಿಸಬೇಕು ಎಂದರು. ತಾವು ಪಡೆದ ಜ್ಞಾನದಿಂದ ತಮ್ಮ ಕುಟುಂಬ, ಸಮುದಾಯ, ಸಮಾಜವನ್ನು ಉನ್ನತಿಗೇರಿಸುವಂತೆ ಆಗಬೇಕು. ಒಟ್ಟು ಭಾರತದ 29 ರಾಜ್ಯಗಳನ್ನು ಒಂದು ಕಟ್ಟಡದ ಅಡಿಪಾಯದ ಕಂಬಗಳಿಗೆ ಹೊಲಿಸಿದ ಅವರು, ಆ ಕಂಬಗಳಲ್ಲಿ ಒಂದು ಕಂಬ ದುರ್ಬಲ ವಾದರೂ, ಕಟ್ಟಡದ ಬಾಳಿಕೆ ಕ್ಷೀಣಿಸುವಂತೆ, ಭಾರತದ ಏಕತೆಯ ದೃಷ್ಟಿಯಲ್ಲಿ ಎಲ್ಲಾ ರಾಜ್ಯಗಳು ಅಭಿವೃದ್ದಿಯಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಈಶಾನ್ಯದ ಒಟ್ಟು 8 ರಾಜ್ಯಗಳಲ್ಲಿನ ಏಳು ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಂಟೂ ರಾಜ್ಯಗಳ ವಿದ್ಯಾರ್ಥಿಗಳು ಅಭ್ಯಸಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪೂರ್ವಂಚಲ ಸೀಮೆಯ ಅಭಿವೃದ್ದಿಯಲ್ಲಿ ಪಿ. ಬಿ. ಆಚಾರ್ಯರ ಕೊಡುಗೆ ಅಪಾರ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆ ಭಾಗದ ವಿದ್ಯಾರ್ಥಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪಿ.ಬಿ ಆಚಾರ್ಯರ ಧರ್ಮಪತ್ನಿ ಕವಿತಾ ಆಚಾರ್ಯ, ಅಲಹಾಬಾದ್ ಐಐಐಟಿಯ ನಿರ್ದೇಶಕ ಡಾ ಪಿ ನಾಗಭೂಷಣ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ವಿದ್ಯಾರ್ಥಿನಿ ಮಣಿಪುರದ ಮಿರ್ಧಾನಿ ಶರ್ಮ ಕನ್ನಡದಲ್ಲಿ ನಿರೂಪಣೆ ಮಾಡಿದರು.
ಒಂದು ದೇಶದ ಅಭಿವೃದ್ದಿಯಲ್ಲಿ ತ್ರಿ ’ಇ’ ಕ್ಯೂಬ್ಗಳಾದ, ಎಜುಕೇಶನ್, ಇಲೆಕ್ಟ್ರೀಸಿಟಿ, ಎಂಪ್ಲಾಯ್ಮೆಂಟ್ ಹೆಚ್ಚಿನ ಪ್ರಾದಾನ್ಯತೆಯನ್ನು ಪಡೆದಿವೆ. ಸರ್ವ ಶ್ರೇಷ್ಠ ಹಾಗೂ ಸಂಪದ್ಭರಿತ ಭಾರತದ ನಿರ್ಮಾಣದಲ್ಲಿ ನಾವೆಲ್ಲರೂ ಕೈಜೋಡಿಸಬೇಕು, ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಅವಕಾಶಗಳಿಗೆ ತೆರೆದುಕೊಂಡು, ತಮ್ಮ ಅಭಿವೃದ್ಧಿಯ ಜೊತೆಗೆ ತಮ್ಮ ರಾಜ್ಯದ ಉನ್ನತೀಕರಣದಲ್ಲಿ ತೊಡಗಬೇಕು.
-ಪಿ.ಬಿ ಆಚಾರ್ಯ
ರಾಜ್ಯಪಾಲರು, ನಾಗಲ್ಯಾಂಡ್