ಮೋಂಟುಗೋಳಿ: ಮಳೆಗಾಲದಲ್ಲೂ ನೀರಿಲ್ಲ !
ಮಂಗಳೂರು, ಆ. 24: ದ.ಕ.ಜಿಲ್ಲಾದ್ಯಂತ ಕಳೆದ ಎರಡು ತಿಂಗಳಿನಿಂದೀಚೆಗೆ ಧಾರಾಕಾರ ಮಳೆ ಸುರಿದರೂ ಕೂಡ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಪಂ ವ್ಯಾಪ್ತಿಯ ಮೋಂಟುಗೋಳಿಯಲ್ಲಿ ಕಳೆದ 10 ದಿನಗಳಿಂದ ನೀರಿಲ್ಲ. ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕಿದ್ದ ಆಡಳಿತವು ಜನರ ಸಮಸ್ಯೆಗೆ ಕಿವಿಯಾಗುವ ಬದಲು ಕೈ ಚೆಲ್ಲಿ ಕುಳಿತಿವೆ. ಇದರಿಂದ ಹತಾಶರಾದ ಗ್ರಾಮಸ್ಥರು ಮುಂದೇನು ಮಾಡಬೇಕು ಎಂದು ತೋಚದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಪಂ ಆಡಳಿತವು ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ಮತ್ತು ಮಳೆಗಾಲದಲ್ಲಿ ವಾರಕ್ಕೆ ಮೂರು ಬಾರಿ ನಳ್ಳಿ ನೀರಿನ ಪೂರೈಕೆ ಮಾಡುತ್ತಿತ್ತು. ಮನೆ ಮಂದಿ ಇದನ್ನು ಸಂಗ್ರಹಿಸಿಕೊಂಡು ಬಳಕೆ ಮಾಡುತ್ತಿದ್ದರು. ಆದರೆ ಅದೇಕೋ ಕಳೆದ 10 ದಿನದಿಂದ ಒಂದು ತೊಟ್ಟು ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಸುಮಾರು 100 ಕ್ಕೂ ಅಧಿಕ ಮನೆ ಮಂದಿ ಅತಂತ್ರರಾಗಿದ್ದಾರೆ.
ಈ ಪರಿಸರದಲ್ಲಿ ಪರ್ಯಾಯ ಬಳಕೆಗಾಗಿ ಬೋರ್ವೆಲ್ ಅಥವಾ ಬಾವಿಯೂ ಇಲ್ಲ. ಹಾಗಾಗಿ ಗ್ರಾಮಸ್ಥರು ಎರಡ್ಮೂರು ದಿನಕ್ಕೊಮ್ಮೆ ಸ್ವತಃ ಹಣ ವ್ಯಯಿಸಿ ಟ್ಯಾಂಕರ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮೀನು ವ್ಯಾಪಾರಿ ಫಾರೂಕ್ ಮೋಂಟುಗೋಳಿ ‘10 ದಿನದಿಂದ ನೀರಿಲ್ಲದೆ ಕಂಗಾಲಾಗಿದ್ದೇವೆ. ಗ್ರಾಪಂ ಆಡಳಿತದ ಗಮನ ಸೆಳೆದೆವು. ಪ್ರಯೋಜನವಾಗಲಿಲ್ಲ. ಬಳಿಕ ಬಂಟ್ವಾಳ ತಾಪಂ ಇಒ ಅವರಿಗೂ ತಿಳಿಸಿದೆವು. ಎಲ್ಲರೂ ಭರವಸೆ ನೀಡಿದರೇ ವಿನಃ ಸಮಸ್ಯೆಗೆ ಪರಿಹಾರ ನೀಡಿಲ್ಲ. ಮಳೆಗಾಲದಲ್ಲೂ ನೀರಿಲ್ಲ ಎಂಬದು ಅಚ್ಚರಿಯ ವಿಚಾರ’ ಎಂದಿದ್ದಾರೆ.