ಮೂಡುಬಿದಿರೆಯಿಂದ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ: ಹರಿಪ್ರಸಾದ್ ನಾಯಕ್
ಮಂಗಳೂರು, ಆ.24: ಮೂಡುಬಿದಿರೆ ನಗರದಿಂದ ಕಾರ್ಕಳ, ಮಂಗಳೂರಿಗೆ ತುರ್ತಾಗಿ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದರೆ ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚಿನ ಸಾರಿಗೆ ಲಾಭವಾಗುತ್ತದೆ. ಕೂಡಲೇ ಸರಕಾರ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಭ್ರಷ್ಟಾಚಾರ ವಿರೋಧ ಜಾಗೃತ ಸೇವಾ ದಳದ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಆಗ್ರಹಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾರ್ಗದಲ್ಲಿ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವುದರಿಂದ ವಿದ್ಯಾರ್ಥಿಗಳು, ನೌಕರರು, ಅಂಗವಿಕಲರು, ಎಂಡೋಸಲ್ಫಾನ್ ಪೀಡಿತರು, ಸ್ವಾತಂತ್ರ ಹೋರಾಟಗಾರರಿಗೆ ಹೆಚ್ಚಿನ ಉಪಯೋಗವಾಗುತ್ತದೆ. ಮೂಡುಬಿದಿರೆ ಪಟ್ಟಣಕ್ಕೆ ಸರಕಾರಿ ಬಸ್ ಕಲ್ಪಿಸುವುದರ ಜೊತೆಗೆ ಬಸ್ ನಿಲ್ದಾಣವನ್ನು ನಿರ್ಮಿಸುವ ಅಗತ್ಯತೆಯೂ ಇದೆ ಎಂದರು.
ಯೋಜನಾ ಪ್ರಾಧಿಕಾರದ ಕಚೇರಿಯು ಮೂಡುಬಿದಿರೆ ಪುರಸಭೆಯ ಕಟ್ಟಡದ ಕಾರು ಪಾರ್ಕ್ನಲ್ಲಿ ಕಚೇರಿ ಕಟ್ಟಡ ಇರುವುದರಿಂದ ಕಚೇರಿಯ ಇರುವಿಕೆಯು ಕಾನೂನು ಪ್ರಕಾರ ಉಲ್ಲಂಘನೆಯಾಗುತ್ತದೆ. ಯೋಜನಾ ಪ್ರಾಧಿಕಾರಕ್ಕೆ ಶಾಶ್ವತ ಕಟ್ಟಡದ ಅಗತ್ಯತೆಯಿದೆ ಎಂದು ಹೇಳಿದರು.
ತಾಲೂಕು ಕೇಂದ್ರದಲ್ಲಿ ಕೃಷಿ ಇಲಾಖೆಗೆ ಕಾಯ್ದಿರಿಸಿದ ಭೂಮಿಯಾಗಲಿ, ಶಾಶ್ವತ ಕಟ್ಟಡ ಇಲ್ಲದಿರುವುದರಿಂದ ರೈತಾಪಿ ವರ್ಗದವರಿಗೆ ಸರಕಾರಿ ಸೌಲಭ್ಯ ಸಿಗುವುದು ಕಷ್ಟಸಾಧ್ಯವಾಗಿದೆ. ಇಲ್ಲಿನ ರೈತರ ಹಿತದೃಷ್ಟಿಯಿಂದ ಸುಸಜ್ಜಿತ ರೈತ ಭವನ ಹಾಗೂ ಕೃಷಿ ಇಲಾಖೆಯ ಕಟ್ಟಡದ ಅಗತ್ಯತೆಯಿದೆ ಎಂದು ತಿಳಿಸಿದರು.
ಮೂಡುಬಿದಿರೆ ಪ್ರದೇಶದಲ್ಲಿ 94ಸಿಸಿ ಅಡಿಯಲ್ಲಿ ಭೂ ಮಂಜೂರಾತಿ ಪಡೆಯುವ ಉದ್ದೇಶದಿಂದ ಪ್ರಭಾವಿ ಭೂ ಮಾಲಕರು ಸರಕಾರಿ ಭೂಮಿಯನ್ನು ಒತ್ತುವರಿ ಮಾಡುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮೂಡುಬಿದಿರೆ ಕೋಟೆಯನ್ನು ಆರ್ಥಿಕ ಕ್ರೋಡೀಕರಣದ ಪ್ರಮುಖ ಕೇಂದ್ರವನ್ನಾಗಿ ಪರಿವರ್ತಿಸಬೇಕು. ಕೋಟೆಯಲ್ಲಿ ಮೂಡುಬಿದಿರೆ ಪಟ್ಟಣಕ್ಕೆ ಉತ್ತಮ ಉದ್ಯಾನವನವನ್ನು ನಿರ್ಮಾಣ ಮಾಡಬೇಕು. ಇದರಿಂದ ಸುಂದರ, ಸ್ವಚ್ಛಂದ ನಗರವನ್ನು ನಿರ್ಮಾಣ ಮಾಡಿದಂತಾಗುತ್ತದೆ. ಜಿಲ್ಲಾಡಳಿತ, ಸರಕಾರ ಗಮನಹರಿಸಿ ತುರ್ತಾಗಿ ಕಾರ್ಯ ಪ್ರವೃತ್ತರಾಗುವಂತೆ ಅವರು ಒತ್ತಾಯಿಸಿದರು.
ಮೂಡುಬಿದಿರೆ ಕೋಟೆ ಒತ್ತುವರಿ: ಆರೋಪ
ಮೂಡುಬಿದಿರೆಯು ಕೆಳದಿ ಸಂಸ್ಥಾನದ ರಾಜರು ಆಡಳಿತ ಮಾಡಿರುವ ಪ್ರದೇಶವಾಗಿದೆ. ಮೂಡುಬಿದಿರೆ ಕೋಟೆಬಾಗಿಲಿನಲ್ಲಿರುವ ಏಕೈಕ ಸಾಕ್ಷಿಯಾಗಿರುವ ಸಾವಿರಾರು ವರ್ಷಗಳ ಇತಿಹಾಸ ಇರುವ ಕೋಟೆಯನ್ನು ಪ್ರಭಾವಿಗಳು ಒತ್ತುವರಿ ಮಾಡುತ್ತಿದ್ದಾರೆ. ಇಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವುದರಿಂದ ಪ್ರಾಚೀನ ಸ್ಮಾರಕವೊಂದು ಇತಿಹಾಸದ ಪುಟ ಸೇರುವ ಸಾಧ್ಯತೆಯಿದೆ ಎಂದು ಭ್ರಷ್ಟಾಚಾರ ವಿರೋಧ ಜಾಗೃತ ಸೇವಾ ದಳದ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಆತಂಕ ವ್ಯಕ್ತಪಡಿಸಿದ್ದಾರೆ.