ಆ.27: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಮಣಿಪಾಲಕ್ಕೆ; ಚೀನಾ ಅಧ್ಯಯನ ಕೇಂದ್ರ ಉದ್ಘಾಟನೆ, ಉಪನ್ಯಾಸ
ಮಣಿಪಾಲ, ಆ.25: ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರು ಆ.27 ಮತ್ತು 28ರಂದು ಮಣಿಪಾಲಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮಾಹೆಯ ಡಿಪಾರ್ಟ್ಮೆಂಟ್ ಆಫ್ ಜಿಯೋಪೋಲಿಟಿಕ್ಸ್ ಎಂಡ್ ಇಂಟರ್ನೇಷನಲ್ ರಿಲೇಷನ್ಸ್ನ ವತಿಯಿಂದ ಪ್ರಾರಂಭಗೊಳ್ಳುವ ‘ಚೀನಾ ಅಧ್ಯಯನ ಕೇಂದ್ರ’ವನ್ನು ಆ.27ರ ಸೋಮವಾರ ಸಂಜೆ 4:30ಕ್ಕೆ ಉದ್ಘಾಟಿಸಲಿದ್ದಾರೆ ಎಂದು ಮಾಹೆ ಜಿಯೋಪೋಲಿಟಿಕ್ಸ್ ವಿಭಾಗದ ಮುಖ್ಯಸ್ಥ ರಾದ ಡಾ.ಅರವಿಂದ ಕುಮಾರ್ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸಚಿವ ಅಕ್ಬರ್ ಅವರು ಮರುದಿನ ಆ.28ರ ಬೆಳಗ್ಗೆ 10:15ಕ್ಕೆ ಮಣಿಪಾಲದ ಹೊಟೇಲ್ ವ್ಯಾಲಿವ್ಯೆನ ಚೈತ್ಯಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘21ನೇ ಶತಮಾನದಲ್ಲಿ ಭಾರತದ ವಿದೇಶಿ ನೀತಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದವರು ತಿಳಿಸಿದರು.
ಜಿಯೋಪೋಲಿಟಿಕ್ಸ್ನ ಕ್ರಿಯಾತ್ಮಕ ಸ್ವರೂಪದಲ್ಲಿ ಮಹತ್ವದ ಬದಲಾವಣೆ ಗಳಾಗುತ್ತಿರುವ ಇಂದಿನ ದಿನಗಳಲ್ಲಿ ಮಣಿಪಾಲದಲ್ಲಿ ಚೀನಾ ಅಧ್ಯಯನ ಕೇಂದ್ರ ಪ್ರಾರಂಭಗೊಳ್ಳುತ್ತಿರುವುದು ಸಕಾಲಿಕವಾಗಿದೆ ಎಂದು ಡಾ.ಕುಮಾರ್ ಅಭಿಪ್ರಾಯಪಟ್ಟರು.
ಚೀನಾ ದೇಶದ ಕುರಿತು ವಿಶೇಷ ತಿಳುವಳಿಕೆಯುಳ್ಳ ವಿಷಯ ತಜ್ಞರ ಅಗತ್ಯ ಇಂದು ಇದ್ದು, ಚೀನಾದ ಉದ್ದೇಶ, ಮೂಲಭೂತ ಗುರಿ ಹಾಗೂ ವರ್ತನೆಗಳ ಕುರಿತು ಅರಿವು ಹೊಂದಿರಬೇಕಾಗುತ್ತದೆ. ಇಲ್ಲಿನ ಕೇಂದ್ರದಲ್ಲಿ ಚೀನಾ ಕುರಿತು ಒಳ್ಳೆಯ ಸಂಶೋಧಕರು ಹಾಗೂ ವಿಶ್ಲೇಷಕರನ್ನು ಸಿದ್ಧಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ಮಾಹೆಯ ಚೀನಾ ಅಧ್ಯಯನ ಕೇಂದ್ರದಲ್ಲಿ ರಾಜಕೀಯ, ಆರ್ಥಿಕ, ವ್ಯವಹಾರ, ಸಮಾಜ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬಹುಮುಖ ವಿಷಯದ ಕುರಿತ ಅಧ್ಯಯನ ಮತ್ತು ಸಂಶೋಧನೆ ಹೆಚ್ಚಿನ ಒತ್ತು ನೀಡಲಾಗುವುದು ಎಂದ ಡಾ.ಅರವಿಂದ ಕುಮಾರ್, ಚೀನದ ಕುರಿತು ಸಮಗ್ರ ಜ್ಞಾನ ಹೊಂದಿರುವ ಯುವ ವಿಶ್ಲೇಷಕರ ಪಡೆಯೊಂದನ್ನು ಸಿದ್ಧಪಡಿಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದರು.