ಎಸ್ಡಿಸಿಸಿ ಬ್ಯಾಂಕ್ ವತಿಯಿಂದ ಕೇರಳ -ಕೊಡಗು ಸಂತ್ರಸ್ತರ ನಿಧಿ ಸಂಗ್ರಹಕ್ಕೆ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮನವಿ
ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದಿಂದ 50ಲಕ್ಷರೂ ದೇಣಿಗೆ
ಮಂಗಳೂರು, ಆ. 25: ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಅಪಾರ ಸೊತ್ತು ಹಾಗೂ ಜೀವ ಹಾನಿಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕೇರಳ-ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹ ಖಾತೆ ತೆರಯಲಾಗಿದೆ.
ಸೆ.1ರಂದು ನಡೆಯುವ ಬ್ಯಾಂಕಿನ ಮಹಾ ಸಭೆಯ ಸಂದರ್ಭದಲ್ಲಿ ಸದಸ್ಯರು ಹಾಗೂ ಸಂಘಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಧಿ ಸಂಗ್ರಹಿಸಲು ನೆರವು ನೀಡಬೇಕು ಎಂದು ಎಸ್ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದಿಂದ 50 ಲಕ್ಷ ರೂ. ದೇಣಿಗೆಯನ್ನು ರಾಜ್ಯದ ಮುಖ್ಯ ಮಂತ್ರಿಯ ಪರಿಹಾರ ನಿಧಿಗೆ ನೀಡಲಾಗಿದ್ದು ,ಒಂದು ಲೋಡ್ ತೊಗರಿ ಬೇಳೆಯನ್ನು ಕೇರಳ ರಾಜ್ಯಕ್ಕೆ ನೀಡಲಾಗಿದೆ. ಎಸ್ಸಿಡಿಸಿ ಬ್ಯಾಂಕ್ ನಿಂದ 50 ಲಕ್ಷ ರೂ. ದೇಣಿಗೆ ಹಾಗೂ ಸಿಬ್ಬಂದಿಗಳ ಒಂದು ದಿನದ ವೇತನ ಮತ್ತು ನಿಧಿ ಸಂಗ್ರಹದ ಮೂಲಕ ಸಂಗ್ರಹವಾದ ಮೊತ್ತವನ್ನು ನೆರೆ ಸಂತ್ರಸ್ತರಿಗೆ ಕೇಂದ್ರ ಮತ್ತು ರಾಜ್ಯದ ಪರಿಹಾರ ನಿಧಿಗೆ ನೀಡಲಾಗುವುದು. ನವೋದಯ ಗ್ರಾಮ ವಿಕಾಸ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕೇರಳ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ನಿಧಿಗೆ ತಲಾ 10 ಲಕ್ಷ ಹಾಗೂ ಒಟ್ಟು 5 ಸಾವಿರ ಸೀರೆ ನೀಡಲಾಗಿದೆ ಎಂದು ಡಾ.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಎಸ್ಸಿಡಿಸಿಸಿ ಬ್ಯಾಂಕ್ ಕಳೆದ 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ , 2001ರ ಗುಜರಾತ್ ಭೂಕಂಪದ ಸಂದರ್ಭದಲ್ಲಿ , 2004ರಲ್ಲಿ ದಕ್ಷಿಣ ಭಾರತದಲ್ಲಿ ಸುನಾಮಿ ಅಪ್ಪಳಿಸಿದಾಗ, 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಜಲಪ್ರಳಯ ಉಂಟಾದಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳು ಹಾಗೂ ಸಹಕಾರಿ ಸಂಘ ಸಂಸ್ಥೆಗಳು ಸ್ಪಂದಿಸಿ ಅಪಾರ ನೆರವು ದೇಣಿಗೆಯನ್ನು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲ್ಲಾ ಸಹಕಾರಿ ಹಾಗೂ ಸಹಕಾರಿ ಸಂಘಗಳು ಒಗ್ಗೂಡಿ ಬೃಹತ್ ನಿಧಿಯನ್ನು ಸಂಗ್ರಹಿಸಿ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಿಯಲ್ ಬೈಲ್ ಎಸ್ಸಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ‘ಕೇರಳ -ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ ’’ ಖಾತೆ ತೆರೆಯಲಾಗಿದೆ (ಖಾತೆ ಸಂಖ್ಯೆ 00145050000755 ಐಎಫ್ಎಸ್ಸಿ ಕೋಡ್ ಐಬಿಕೆಎಲ್ 078ಎಸ್ಸಿ ಡಿಸಿ). ಈ ಖಾತೆಗೆ ಅವಿಭಜಿತ ದ.ಕ ಜಿಲ್ಲೆಯ ಸಹಕಾರಿ ಸಂಘ ಸಂಸ್ಥೆಗಳು, ನವೋದಯ ಸ್ವ ಸಹಾಯ ಗುಂಪುಗಳು ಹಾಗೂ ಸಾರ್ವಜನಿಕರು ಬ್ಯಾಂಕಿನ ಯಾವೂದೇ ಶಾಖೆ ಯಿಂದ ಖಾತೆಗೆ ಜಮೆ ಮಾಡಬಹುದಾಗಿದೆ. ಸಂಗ್ರಹವಾದ ಮೊತ್ತವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಹಾಗೂ ಮುಖ್ಯ ಮಂತ್ರಿ ನೆರೆ ಪರಿಹಾರ ನಿಧಿಗೆ ಹಸ್ತಾಂತರಿಸಲಾಗುವುದು.
ಸೆ.1ರಂದು ಬ್ಯಾಂಕಿನ ಮಹಾ ಸಭೆ ನಡೆಯಲಿದೆ ಈ ಸಂದರ್ಭದಲ್ಲಿ ಹಾಜರಾಗುವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇಣಿಗೆ ನೀಡಿ ಸಹಕರಿಸಬೇಕು ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ,ನಿರ್ದೇಶಕರಾದ ಟಿ.ಜಿ.ರಾಜರಾಮ ಭಟ್,ಜಯರಾಮ ರೈ, ಸದಾಶಿವ ಉಳ್ಳಾಲ್, ದೇವಿಪ್ರಸಾದ್ ಶೆಟ್ಟಿ ಬೆಳಪು, ರಘು ರಾಮ ಶೆಟ್ಟಿ, ರಾಜು ಪೂಜಾರಿ, ವಾದಿ ರಾಜ ಶೆಟ್ಟಿ, ರಾಜೇಶ್ ರಾವ್, ಶಶಿಕುಮಾರ್ ರೈ, ಮಹಾ ಪ್ರಬಂಧಕ ಗೋಪಿನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು.