ಓಣಂ ಆಚರಣೆ ರದ್ದು: ಕೇರಳ, ಕೊಡಗು ನೆರೆ ಸಂತ್ರಸ್ತರಿಗೆ ದೇಣಿಗೆ
ಉಡುಪಿ, ಆ.25: ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಉಡುಪಿ ವತಿಯಿಂದ ಉಡುಪಿಯಲ್ಲಿ ಪ್ರತಿವರ್ಷ ಆಚರಿಸಲಾಗುವ ಓಣಂ ಹಬ್ಬವನ್ನು ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿದ ನೆರೆಯ ಹಿನ್ನೆಲೆಯಲ್ಲಿ ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಸೆಂಟರ್ನ ಅಧ್ಯಕ್ಷ ಮೋಹನ್ದಾಸ್ ಪಿ.ಎ. ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪದಲ್ಲಿ ಸಾವುನೋವುಗಳಿಗೆ ತುತ್ತಾಗಿರುವವರಿಗೆ ಸಹಾಯ ಹಸ್ತ ನೀಡುವುದು ಸಂಘದ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸೆ. 9ರಂದು ಆಚರಿಸಲು ಉದ್ದೇಶಿಸಲಾಗಿದ್ದ ಓಣಂ ಹಬ್ಬದ ಆಚರಣೆಯನ್ನು ರದ್ದು ಪಡಿಸಲು ಆ. 22ರಂದು ನಡೆದ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಅದೇ ರೀತಿ ಸಂಘದ ವತಿಯಿಂದ ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಪ್ರಥಮ ಹಂತದಲ್ಲಿ ಒಂದು ಲಕ್ಷ ರೂ. ಹಾಗೂ ಕರ್ನಾಟಕ ರಾಜ್ಯ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 25 ಸಾವಿರ ರೂ. ದೇಣಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಟಿ.ಎ.ರವಿರಾಜನ್, ಕೋಶಾಧಿಕಾರಿ ಪ್ರಸನ್ನರಾಜ್, ಮಾಜಿ ಅಧ್ಯಕ್ಷ ಲಕ್ಷ್ಮಣ್, ರವೀಂದ್ರ ನಾಯರ್ ಉಪಸ್ಥಿತರಿದ್ದರು.