ರಾಜ್ಯ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವುದು ಬಿಜೆಪಿ: ದಿನೇಶ್ ಗುಂಡೂರಾವ್ ಹೇಳಿಕೆ
ಉಡುಪಿ, ಆ.25: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಿನ್ನೆ ಸಭೆಯೊಂದರಲ್ಲಿ ಮಾತನಾಡುವಾಗ ಜನರ ಬೇಡಿಕೆಗೆ ಔಪಚಾರಿಕವಾಗಿ ಸ್ಪಂದಿಸಿ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆಯೇ ಹೊರತು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಇರಾದೆಯಿಂದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹೊಳೆನರಸಿಪುರದ ಸಭೆಯೊಂದರಲ್ಲಿ ಅವರು ತಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದಾಕ್ಷಣ ಈಗಿರುವ ಸರಕಾರ ಅಸ್ಥಿರವಾಗುವುದಿಲ್ಲ. ಈಗಿನ ಸರಕಾರ ಐದು ವರ್ಷಗಳ ಕಾಲ ಆಡಳಿದಲ್ಲಿರುತ್ತೆ. ಮುಂದಿನ ಸಿಎಂ ಯಾರು ಎಂಬುದು ಈಗ ಅಪ್ರಸ್ತುತ ಎಂದರು.
ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ಬಿಜೆಪಿ ಪಕ್ಷ. ಅಧಿಕಾರಕ್ಕೇರಲು ಎಲ್ಲಾ ರೀತಿಯ ಅನೈತಿಕ, ಅತ್ಯಂತ ಕೀಳು ಮಟ್ಟ ಪ್ರಯತ್ನದಲ್ಲಿ ಅದು ತೊಡಗಿಕೊಂಡಿದೆ. ಆದರೆ ಅವರ ಪ್ರಯತ್ನ ಯಶಸ್ವಿಯಾಗುತ್ತಿಲ್ಲ. ಅವರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಸತತ ಪ್ರಯತ್ನದಲ್ಲಿದ್ದಾರೆ. ಅವರೆಂದೂ ತಮ್ಮ ಪ್ರಯತ್ನದಲ್ಲಿ ಸಫಲರಾಗರು. ಅವರಿಗೆ ಬೆಂಬಲವಿಲ್ಲ ಎಂದು ದಿನೇಶ್ ಗುಂಡೂರಾವ್ ನುಡಿದರು.
ಭಾಷಣಗಳಲ್ಲಿ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ, ಮಾಡುವುದು ಮಾತ್ರ ಅಧರ್ಮದ ಕೆಲಸಗಳನ್ನು. ಸುಳ್ಳು ಹೇಳಿ ಜನರನ್ನು ಯಾಮಾರಿಸುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಿರುತ್ತಾರೆ. ಈಗ ವಾಜಪೇಯಿ ಚಿತಾಭಸ್ಮದ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನ ಒಳ್ಳೆಯದಲ್ಲ. ವಾಜಪೇಯಿ ಬಗ್ಗೆ ನಮಗೂ ಗೌರವವಿದೆ. ಅವರು ಚಿತಾಭಸ್ಮವನ್ನು ಪವಿತ್ರ ನದಿಗಳಲ್ಲಿ ವಿಸರ್ಜಿಸುವುದು ಒಳ್ಳೆಯ ಕೆಲಸ. ಆದರೆ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ತಪ್ಪು ಎಂದರು.
ನಿನ್ನೆ ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಪರವಾಗಿ ನೆರೆ ಹಾನಿ ವೀಕ್ಷಣೆಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ರ ವರ್ತನೆ ಸರಿಯಿಲ್ಲ. ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಅವರು ಕೊಡಗಿನ ಪರಿಸ್ಥಿತಿಗೆ ಮೀಡಿಯಬೇಕಾಗಿತ್ತು. ಆದರೆ ತಡವಾಗಿ ರಾಜ್ಯಕ್ಕೆ ಬಂದು ತೀರಾ ಸಣ್ಣ ತನದ ವರ್ತನೆ ತೋರಿಸಿದ್ದಾರೆ. ರಾಜ್ಯ ಸರಕಾರವನ್ನು ಅಗೌರವಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಕೇಂದ್ರದ ಪ್ರತಿನಿಧಿಯಾಗಿ ಬಂದು ಕೇಂದ್ರದ ಯಾವುದೇ ಸಹಾಯವನ್ನು ಅವರು ಘೋಷಿಸಿಲ್ಲ. ಅಲ್ಲದೇ ರಾಜ್ಯದಲ್ಲಿರುವ 18 ಮಂದಿ ಬಿಜೆಪಿ ಸಂಸದರು ಸಹ ರಾಜ್ಯದ ಸಂಕಷ್ಟದ ಸಮಯದಲ್ಲಿ ಯಾವುದೇ ನೆರವಿಗೆ ಬಾರದೇ, ರಾಜ್ಯದ ಹಿತವನ್ನು ಕಡೆಗಣಿಸಿದ್ದಾರೆ. ರಾಜ್ಯದ ಯಾವುದೇ ಒಬ್ಬ ಸಂಸದ್ ಸದಸ್ಯ ಕೇಂದ್ರ ಸರಕಾರದ ಮೇಲೆ ಪರಿಹಾರ ಘೋಷಣೆಗಾಗಿ ಒತ್ತಡ ಹೇರಿಲ್ಲ ಎಂದರು.
ಇತ್ತೀಚಿನ ಪ್ರಾಕೃತಿಕ ವಿಕೋಪದಿಂದಾದ ಅಪಾರ ಹಾನಿ, ನಷ್ಟದ ಕುರಿತು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಎರಡು ಪತ್ರಗಳನ್ನು ಬರೆದಿದೆ. ಆದರೆ ಕೇಂದ್ರ ಸರಕಾರ ಈವರೆಗೆ ಯಾವುದೇ ನೆರವನ್ನು ಘೋಷಿಸಿಲ್ಲ. ಅದು ರಾಜ್ಯದ ಕುರಿತು ಮಲೆತಾಯಿ ಧೋರಣೆ ತಳೆದಿದೆ ಎಂದವರು ಆರೋಪಿಸಿದರು. ರಾಜ್ಯದ ಒಬ್ಬನೇ ಒಬ್ಬ ರೈತರ ಸಾಲ ಮನ್ನಾ ಆದರೆ ತಾನು ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿದ ಶ್ರೀರಾಮುಲು ಅವರಿಗೆ ತಿಳುವಳಿಕೆ ಕೊರತೆ ಇದೆ ಎಂದು ಹೇಳಿದರು.
ಪರೇಶ್ ಮೇಸ್ತನಿಗೆ ಶೋಭಾ ನ್ಯಾಯ ಒದಗಿಸಿದರೇ ?
ಕಳೆದ ಸೆಪ್ಟಂಬರ್ ತಿಂಗಳಲ್ಲಿ ಮೃತಪಟ್ಟ ಉತ್ತರ ಕನ್ನಡದ ಪರಮೇಶ ಮೇಸ್ತರ ಹೆಣವನ್ನಿರಿಸಿಕೊಂಡು ಉತ್ತರ ಕನ್ನಡಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಸಂಸದೆ ಶೋಭಾ ಕರಂದ್ಲಾಜೆ ಆತನಿಗೆ ನ್ಯಾಯವನ್ನು ದೊರಸಿಕೊಟ್ಟರೇ ಎಂದು ದಿನೇಶ ಗುಂಡೂರಾವ್ ಪ್ರಶ್ನಿಸಿದರು.ಮೇಸ್ತ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ ಆರು ತಿಂಗಳಾಯಿತು. ಅಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಡಿಸೆಂಬರ್ ತಿಂಗಳಲ್ಲಿ ಪಡೆದ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಿದ್ದು ಎಪ್ರಿಲ್ ತಿಂಗಳಲ್ಲಿ. ಅದರ ತನಿಖೆ ಇನ್ನೂ ಆರಂಭವೇ ಗೊಂಡಿಲ್ಲ ಎಂದು ಅವರು ನುಡಿದರು.
ಪರೇಶ್ ಮೇಸ್ತಗೆ ನಿಜವಾಗಿ ನ್ಯಾಯ ಕೊಡುವ ಮನಸ್ಸಿದ್ದರೆ, ಆಕೆ ತನಿಖೆಯ ಪ್ರಗತಿ ಬಗ್ಗೆ ವಿಚಾರಿಸುತಿದ್ದರು. ಆದರೆ ಅವರಿಗೆ ಬೇಕಿದ್ದುದು ಮೇಸ್ತನ ಸಾವಿನ ರಾಜಕೀಯ ಲಾಭ ಪಡೆಯುವುದು ಮಾತ್ರವಾಗಿತ್ತು. ತನಿಖೆ ನಡೆಸಲು ಒತ್ತಡ ತಂದು ಕೆಲಸ ಮಾಡಿಸುವ ಬದ್ಧತೆಯೇ ಅವರಲ್ಲಿರಲಿಲ್ಲ ಎಂದರು.