ಉಡುಪಿ: ಮಾದಕ ವ್ಯಸನ ವಿರುದ್ಧ ಜಾಗೃತಿಗಾಗಿ ಸೈಕಲ್ ಜಾಥ
ಉಡುಪಿ, ಆ. 26: ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಸೈಕಲ್ ಜಾಥವನ್ನು ರವಿವಾರ ಉಡುಪಿ ನಗರದಲ್ಲಿ ಆಯೋಜಿಸಲಾಗಿತ್ತು.
ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿ, ಉಡುಪಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ಉಡುಪಿ ಮತ್ತು ಕುಂದಾಪುರ ಸೈಕ್ಲಿಂಗ್ ಅಸೊಶೀಯೇಶನ್ ಸಹಕಾರದೊಂದಿಗೆ ನಡೆದ ಜಾಥಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬಿ.ನಿಂಬರಗಿ ಹಾಗೂ ಬಡಗಬೆಟ್ಟು ಕೋ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಬಡಗೆಟ್ಟು ಸೊಸೈಟಿ ಬಳಿ ಚಾಲನೆ ನೀಡಿದರು.
ಅಲ್ಲಿಂದ ಜಾಥವು ಲಯನ್ಸ್ ಸರ್ಕಲ್, ಜೋಡುಕಟ್ಟೆ, ಅಜ್ಜರಕಾಡು, ಬ್ರಹ್ಮಗಿರಿ- ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ, ಕರಾವಳಿ ಬೈಪಾಸ್, ಸಂತೆಕಟ್ಟೆ ಮಾರ್ಗವಾಗಿ ಅಲ್ಲಿಂದ ತಿರುಗಿ ಸಂತೆಕಟ್ಟೆ, ಅಂಬಾಗಿಲು, ಕಲ್ಸಂಕ, ಕಡಿಯಾಳಿ, ಎಂಜಿಎಂ ಕಾಲೇಜು ಮಾರ್ಗವಾಗಿ ಸಾಗಿ ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಎಸ್ಪಿಕಚೇರಿ, ಬ್ರಹ್ಮಗಿರಿ, ಅಜ್ಜರಕಾಡು, ಜೋಡುಕಟ್ಟೆ, ಲಯನ್ಸ್ ಸರ್ಕಲ್ ಮೂಲಕ ಬಡಗಬೆಟ್ಟು ಸೊಸೈಟಿ ಬಳಿ ಸಮಾಪನಗೊಂಡಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬಿ ನಿಂಬರಗಿ, ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ತಮ್ಮ ಶಾರೀರಿಕ ಸದೃಢತೆ ಕಾಪಾಡಲು ಸೈಕ್ಲಿಂಗ್ನಿಂದ ಸಾಧ್ಯ. ಪರಿಸರ ಕಾಳಜಿಯೂ ಈ ಸೈಕ್ಲಿಂಗ್ ನಲ್ಲಿದೆ. ಮಾಸಾಚರಣೆ ಫಲ ಕೊಡಬೇಕಾ ದರೆ ವ್ಯಸನಿಗಳು ಅದನ್ನು ತ್ಯಜಿಸಬೇಕು. ವ್ಯಸನಕ್ಕೆ ಯಾರೂ ಒಳಗಾಗಬಾರದು ಎಂದರು.
ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಉಮಾನಾಥ್, ಪ್ರಧಾನ ವ್ಯವಸ್ಥಾಪಕ ಇಂದ್ರಾಳಿ ಜಯಕರ ಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಉಡುಪಿ ಪ್ರೆಸ್ಕ್ಲಬ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು.