ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ: ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್
ಮಂಗಳೂರು, ಆ.26: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಮಾರ್ಗದರ್ಶನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈಗಿಂದಲೇ ಭರದ ಸಿದ್ಧತೆ ಆರಂಭಿಸಿದೆ ಎಂದು ಎಐಸಿಸಿ ನೂತನ ಕಾರ್ಯದರ್ಶಿ ಸಲೀಂ ಅಹ್ಮದ್ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ರಾಹುಲ್ ಗಾಂಧಿ ಪಕ್ಷದಲ್ಲಿ ಯುವ ಜನಾಂಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಆದ್ಯತೆ ನೀಡುತ್ತಿದ್ದಾರೆ. ಅದರಂತೆ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿ ಪಕ್ಷವನ್ನು ಕಟ್ಟುತ್ತಿದ್ದು, ದೇಶಾದ್ಯಂತ ಪಕ್ಷ ಬಲಿಷ್ಠಗೊಳ್ಳುತ್ತಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಭಾಷಣಗಾರ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೋದಿಯನ್ನು ಮುಂದಿಟ್ಟು ಮತ ಯಾಚಿಸಿದವು. ಮೋದಿ ಕೂಡ ಒಳ್ಳೊಳ್ಳೆಯ ಆಶ್ವಾಸನೆ ನೀಡಿದರು. ಅದನ್ನು ನಂಬಿ ಮತದಾರರು ಬಿಜೆಪಿಯನ್ನು ಗೆಲ್ಲಿಸಿದರು. ಅಧಿಕಾರಕ್ಕೇರಿದ ಬಳಿಕ ಮೋದಿ ತಾನು ನೀಡಿದ ಆಶ್ವಾಸನೆಯನ್ನೆಲ್ಲಾ ಮರೆತಿದ್ದಾರೆ. ವಿದೇಶದಿಂದ ಕಪ್ಪು ಹಣವೂ ಇಲ್ಲ, ಬ್ಯಾಂಕ್ ಖಾತೆಗೆ ಹಣವೂ ಜಮೆ ಆಗಿಲ್ಲ. ಅದನ್ನು ಮತದಾರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಮೋದಿ ಸಹಿತ ಬಿಜೆಪಿಗೆ ಮತದಾರ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 20 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಲೀಂ ಅಹ್ಮದ್, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಆಡಳಿತ ನೀಡಿದ್ದರು. ಆದರೆ ಅದರ ಬಗ್ಗೆ ಸಾಕಷ್ಟು ಪ್ರಚಾರ ಆಗಿರಲಿಲ್ಲ. ಅಲ್ಲದೆ ಪ್ರತಿಪಕ್ಷಗಳು ಕೂಡಾ ಕಾಂಗ್ರೆಸ್ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತ್ತು. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಯಿತು. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಇನ್ನೈದು ವರ್ಷ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಉತ್ತಮ ಆಡಳಿತ ನೀಡಲಿದೆ. ಆ ಬಳಿಕ ಕಾಂಗ್ರೆಸ್ ಬಹುಮತದಿಂದ ರಾಜ್ಯವನ್ನಾಳಲಿದೆ ಎಂದು ಸಲೀಂ ಅಹ್ಮದ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಕೆಪಿಸಿಸಿ ಕಾರ್ಯದರ್ಶಿ ನವೀನ್ ಡಿಸೋಜ, ಡಿಸಿಸಿ ಉಪಾಧ್ಯಕ್ಷ ಬಲರಾಜ ರೈ, ಡಿಸಿಸಿ ಕಾರ್ಯದರ್ಶಿ ನೀರಜ್ ಪಾಲ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೊ, ದ.ಕ.ಜಿಲ್ಲಾ ಎನ್ಎಸ್ಯುಐ ಮಾಜಿ ಅಧ್ಯಕ್ಷ ತೇಜಸ್ವಿ ರಾಜ್, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.