ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ; ಇನ್ನೋರ್ವ ಪರಾರಿ
ಮಂಗಳೂರು, ಆ.26: ನಗರದ ಹೊರವಲಯದ ಉಳಾಯಿಬೆಟ್ಟುವಿನಲ್ಲಿ ತಂಡವೊಂದು ಯುವಕನಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳಾಯಿಬೆಟ್ಟು ಶಿವರಾತ್ರಿಬೆಟ್ಟು ನಿವಾಸಿಗಳಾದ ಸುಹಾಸ್ (27) ಸಾಗರ್ (23) ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ಪ್ರಮೋದ್ (27) ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪ್ರಮೀತ್(26) ಎಂಬವರು ಗಂಭೀರ ಹಲ್ಲೆಗೊಳಗಾಗಿ ನಗರದ ಆಸ್ಪತ್ರೆಗೆ ದಾಖಲಾದವರು.
ಕ್ರಿಕೆಟ್ ಆಟದ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಹಲವು ಸಮಯದ ಹಿಂದೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಮನಸ್ತಾಪವಿದ್ದು ಪದೇಪದೇ ವಾಗ್ವಾದ ನಡೆಯುತ್ತಿತ್ತು. ಶನಿವಾರ ಹಲ್ಲೆಗೊಳಗಾದ ಪ್ರಮೀತ್ನ ಗೆಳೆಯ ಯತೀಶ್ ಕೆಲಸ ಮುಗಿಸಿ ಬರುವಾಗ ಸುಹಾಸ್, ಸಾಗರ್, ಪ್ರಮೋದ್ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ಕಾರಣವನ್ನಿಟ್ಟು ಸ್ವಲ್ಪ ಹೊತ್ತಿನ ಬಳಿಕ ಪ್ರಮೀತ್ ತನ್ನ ಇನ್ನೊಬ್ಬ ಗೆಳೆಯ ಕಾರ್ತಿಕ್ ಜತೆ ಅದೇ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟರಲ್ಲಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಎಲ್ಲ ಯುವಕರು ಅಲ್ಲಿಂದ ಪರಾರಿಯಾದರು.
ಈ ಘಟನೆಯ ಬಳಿಕ ಪ್ರಮೀತ್ ಮನೆಗೆ ಹೋಗಿ ಮಲಗಿದ್ದ. ಇದೇ ವೇಳೆ ಸುಹಾಸ್, ಸಾಗರ್, ಪ್ರಮೋದ್ ಆತನ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಹೊರಗೆ ಬರುವಂತೆ ಕರೆದಿದ್ದಾರೆ. ಅದರಂತೆ ಹೊರಗೆ ಬಂದ ಪ್ರಮೀತ್ನನ್ನು ತಂಡ ಎಳೆದಾಡಿ ಕಲ್ಲು ಮತ್ತು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಸಂದರ್ಭ ಮನೆಯವರು ಬೊಬ್ಬೆ ಹಾಕಿದ್ದು, ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಪ್ರಮೀತ್ನನ್ನು ಸ್ಥಳೀಯರು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದು ಘಟನೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಇಳಿದು ಸುಹಾಸ್ ಮತ್ತು ಸಾಗರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.