ರಫೇಲ್ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ಅಗತ್ಯ: ಜೈವೀರ್ ಶೇರ್ಗಿಲ್
''ದೇಶದ ಬೊಕ್ಕಸಕ್ಕೆ 41,205 ಕೋಟಿ ರೂ. ನಷ್ಟ''
ಮಂಗಳೂರು, ಆ. 27: ದೇಶದ ಬೊಕ್ಕಸಕ್ಕೆ 41,205 ಕೋಟಿ ರೂ. ನಷ್ಟಕ್ಕೆ ಕಾರಣವಾಗಲಿರುವ ಬಿಜೆಪಿಯ ರಪೇಲ್ ಒಪ್ಪಂದ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆಯಾಗಬೇಕು. ಪಾರದರ್ಶಕ ಆಡಳಿತಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಈ ಒಪ್ಪಂದ ವಿರುದ್ಧವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ನ ವಕ್ತಾರ ಜೈವೀರ್ ಶೇರ್ಗಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
2012ರ ಡಿ. 12ರಂದು ಯುಪಿಎ ಸರಕಾರದ ಅವಧಿಯಲ್ಲಿ ತೆರೆಯಲಾದ ಆಂತಾರಾಷ್ಟ್ರೀಯ ಬಿಡ್ ಪ್ರಕಾರ 108 ವಿಮಾನಗಳು ಸಾರ್ವಜನಿಕ ವಲಯದ ಎಚ್ಎಎಲ್ ನಲ್ಲಿ ಫ್ರಾನ್ಸ್ ನಿಂದ ತಾಂತ್ರಿಕತೆಯ ಹಸ್ತಾಂತರದ ಮೂಲಕ ತಯಾರಿಸಲು ನಿಗದಿಯಾಗಿತ್ತು. ಈ ಸಂದರ್ಭ 36 ವಿಮಾನಗಳ ಬೆಲೆ 18,940 ಕೋಟಿ ರೂ. ಎಂದು ನಿಗದಿಪಡಿಸಲಾಗಿತ್ತು.
ಬಳಿಕ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಪ್ಯಾರೀಸ್ಗೆ ಭೇಟಿ ನೀಡಿ, 36 ವಿಮಾನಗಳನ್ನು ಖರೀದಿಸುವ ಬಗ್ಗೆ ಘೋಷಿಸಿದರು. ಇದರ ಬೆಲೆ 41,205 ಕೋಟಿ ರೂ.ಗಳೆಂದು ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಪತ್ರಿಕಾ ಹೇಳಿಕೆಯ ಮೂಲಕ ಬಹಿರಂಗಪಡಿಸಿದೆ. 526 ಕೋಟಿ ರೂ. ನಿಗದಿಯಾಗಿದ್ದ ವಿಮಾನವನ್ನು 1670 ಕೋಟಿ ರೂ. ಗಳಿಗೆ ಹೆಚ್ಚು ಹಣ ನೀಡಿ ಫ್ರಾನ್ಸ್ನಿಂದ ಖರೀದಿಸುವ ಬಗ್ಗೆ ಪ್ರಧಾನಿ ಸಮರ್ಪಕವಾದ ಉತ್ತರವನ್ನು ನೀಡಿಲ್ಲ. ರಕ್ಷಣಾ ಸಂಪುಟ ಸಮಿತಿಯ ಕಡ್ಡಾಯ ಪೂರ್ವ ಅನುಮೋದನೆ ಪಡೆದಿರಲಿಲ್ಲ. ಅಲ್ಲದೆ ಒಪ್ಪಂದ ಸಮಾಲೋಚನಾ ಸಮಿತಿ ಮತ್ತು ಬೆಲೆ ಸಮಾಲೋಚನಾ ಸಮಿತಿ ನಿರ್ಧಾರಗಳನ್ನು ಪಡೆದಿರುವುದಿಲ್ಲ. ಸಾರ್ವಜನಿಕ ವಲಯದ ಎಚ್ಎಎಲ್ಗೆ ತಾಂತ್ರಿಕತೆಯ ಹಸ್ತಾಂತರದ ಮೂಲಕ ರಫೇಲ್ ವಿಮಾನ ಭಾರತದಲ್ಲಿ ತಯಾರಾಗಬೇಕಾಗಿತ್ತು. ಪ್ರಧಾನಿ ಮೋದಿ ಅದನ್ನು ತಪ್ಪಿಸಿದ್ದಾರೆ. ಎಚ್ಎಎಲ್ನ ಗುತ್ತಿಗೆಯನ್ನು ಕಿತ್ತುಕೊಂಡು ರಿಲೆಯನ್ಸ್ ಪಡೆದುಕೊಂಡಿದೆ. ವಿಮಾನ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದ ಖಾಸಗಿ ಕಂಪೆನಿಗೆ ಆಪ್ಸೆಟ್ ಗುತ್ತಿಗೆಯನ್ನು ನೀಡಲು ಮೋದಿ ಏಕೆ ಅನುವು ಮಾಡಿಕೊಟ್ಟಿದ್ದಾರೆ ?. ವಿಮಾನ ತಯಾರಿಕೆಯಲ್ಲಿ ದಶಕಗಳ ಅನುಭವವಿರುವ ಸಾರ್ವಜನಿಕ ವಲಯದ ಎಚ್ಎಎಲ್ ಸಂಸ್ಥೆಯನ್ನು ಕಡೆಗಣಿಸಲು ಅವಕಾಶ ಮಾಡಿಕೊಟ್ಟಿರುವುದೇಕೆ ? ಏಕಪಕ್ಷೀಯವಾಗಿ ಎಪ್ರಿಲ್ 10, 2015ರಂದು ಪ್ರಧಾನಿ ಮೋದಿ 36 ವಿಮಾನಗಳನ್ನು ಖರೀದಿಸುವ ತೀರ್ಮಾನ ಮಾಡಿರುವುದು, ತನ್ನ ಆಪ್ತ ಬಂಡವಾಳ ಶಾಹಿ ಸ್ನೇಹಿತರಿಗೆ ಉತ್ತೇಜನ ನಿಡುವ ಉದಾಹರಣೆಯಾಗಿದೆ ಎಂದು ಜೈವೀರ್ ಶೇರ್ಗಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ಸಂಚಾಲಕ ಸಂಜಯ್ ಸಿಂಗ್, ಜಿಲ್ಲಾ ವಕ್ತಾರ ವಿನಯ ರಾಜ್, ಟಿ.ಕೆ. ಸುಧೀರ್, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.