ಬಂಟ್ವಾಳ ಪುರಸಭಾ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಬಂಟ್ವಾಳ, ಆ. 27: ಘನ-ದ್ರವ ತ್ಯಾಜ್ಯ ವಿಲೇವಾರಿಗೆ ಜರ್ಮನ್ ಮಾದರಿ ಪೈರೋಲಿಸಿಸ್ ತಂತ್ರಜ್ಞಾನ ಅಳವಡಿಕೆ, ಹೈಟೆಕ್ ಈಜುಕೊಳ, ವಸತಿ ರಹಿತರಿಗೆ ಪ್ಲ್ಯಾಟ್ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ, ಉಚಿತ ವೈಫೈ.... ಇದು ಕಾಂಗ್ರೆಸ್ ಸಂಕಲ್ಪ.
ಸೋಮವಾರ ಬಿ.ಸಿ.ರೋಡ್ನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಚೇರಿಯಲ್ಲಿ ಪುರಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಘನ-ದ್ರವ ತ್ಯಾಜ್ಯ ವಿಲೇವಾರಿಗೆ ಜರ್ಮನ್ ಮಾದರಿ ಪೈರೋಲಿಸಿಸ್ ತಂತ್ರಜ್ಞಾನ ಅಳವಡಿಕೆಗೆ 1 ಕೋಟಿ ರೂ. ಮಂಜೂರಾತಿಯಾಗಿದೆ. ಅದೇ ರೀತಿ ಒಳಾಂಗಣ ಕ್ರೀಡಾಂಗಣ, ಹೈಟೆಕ್ ಈಜುಕೊಳ, ವಸತಿ ರಹಿತರಿಗೆ ಪ್ಲ್ಯಾಟ್ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣ ಹಾಗೂ ನಿವೇಶನ ರಹಿತರಿಗೆ ನಿವೇಶನ, ಉದ್ಯೋಗ ಮೇಳ ಆಯೋಜನೆ, ಮಂಜೂರಾದ ಒಳಚರಂಡಿ ಯೋಜನೆಯ ಶ್ರೀಘ್ರ ಅನುಷ್ಠಾನ, ಪುರಸಭಾ ವ್ಯಾಪ್ತಿಯಲ್ಲಿ ಉಚಿತ ವೈಫೈ, ರಿಕ್ಷಾ ಚಾಲಕರಿಗೆ ೪ ಕಡೆಗಳಲ್ಲಿ ಸುಸಜ್ಜಿತ ಪಾರ್ಕಿಂಗ್ ಸೌಲಭ್ಯ, ಆಂಬುಲೆನ್ಸ್, ಸ್ವ-ಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಳ ಕಾಯ್ದಿರಿಸುವುದು, ನೇತ್ರಾವತಿ ನದಿ ಕಿನಾರೆಯಲ್ಲಿ ವಾಕಿಂಗ್ ಟ್ರ್ಯಾಕ್, ಅಸಂಘಟಿತ ವಲಯದ ಕಾರ್ಮಿಕರಿಗೆ, ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವು, ಮನೆ ಹಾಗೂ ಅಂಗಡಿಗಳಿಗೆ ತೆರಿಗೆ ರಿಯಾಯಿತಿ, ವಾಕಿಂಗ್ ಟ್ರಾಕ್ ನಿರ್ಮಾಣ, ಹುತಾತ್ಮ ಸೈನಿಕರ ಸ್ಮಾರಕ ನಿರ್ಮಾಣ ಮಾಡಲಾಗುವುದು. ಇದು ಕೇವಲ ಭರವಸೆಯಲ್ಲ, ಬದ್ಧತೆ ಎಂದು ಹೇಳಿದರು.
ಬಂಟ್ವಾಳ ಪುರಸಭೆಯ ಸಮಗ್ರ ಅಭಿವೃದ್ಧಿ ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಕಾಂಗ್ರೆಸ್ ಬೆಂಬಲಿಸಿ, ಸಮೃದ್ಧಿ ಹಾಗೂ ನೆಮ್ಮದಿಯ ಪುರಸಭೆಯ ಅಭಿವೃದ್ಧಿಗೆ ಮತ ನೀಡುವಂತೆ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ನುಡಿದಂತೆ ನಡೆದಿದ್ದೇವೆ, ಮುಂದಕ್ಕೂ ನಡೆಯುತ್ತೇವೆ ಎಂದರು.
ಕಾಂಗ್ರೆಸ್ ಆಡಳಿತದ ತನ್ನ ಶಾಸಕತ್ವದ ಅವಧಿಯಲ್ಲಿ ಬಂಟ್ವಾಳ ಪುರಸಭೆಯನ್ನು ಹಂತಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸಮಗ್ರ ಕುಡಿಯುವ ನೀರಿನ ಸರಬರಾಜು ಯೋಜನೆಯನ್ನು ಬಹಳ ಮುತುವರ್ಜಿಯಿಂದ ಅನುಷ್ಠಾನ ಮಾಡಿದ್ದೇನೆ. ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೆರಿಸುವ ಬಗ್ಗೆ ಪ್ರಯತ್ನ ಮಾಡಿದ್ದೆ. ಆದರೆ, ಬಿಜೆಪಿ ಬೆಂಬಲಿತ ಆಡಳಿತವಿರುವ ಕೆಲವು ಪಂಚಾಯತ್ಗಳ ಒಪ್ಪಿಗೆ ಇಲ್ಲದಿರುವುದರಿಂದ ಪುರಸಭೆಯಾಗಿಯೇ ಉಳಿದಿದೆ ಎಂದರು.
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಸೇರಿದ ಎಲ್ಲ ರಸ್ತೆಗಳನ್ನು ಡಾಮಾರೀಕರಣ, ಕೆಲವು ರಸ್ತೆಗಳ ಕಾಂಕ್ರಿಟೀಕರಣ, ಪರಿಸರ ಇಲಾಖೆಯಿಂದ ವಿಶೇಷ ಅನುದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ, ಒಳಚರಂಡಿ ಯೋಜನೆಗೆ ಮಂಜೂರಾತಿಯಾಗಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ಮಮತಾ ಗಟ್ಟಿ, ಚಂದ್ರ ಪ್ರಕಾಶ್ ಶೆಟ್ಟಿ, ಮಂಜುಳಾ ಮಾದವ ಮಾವೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾ ಉಪಾಧ್ಯಕ್ಷ ಬೇಬಿ ಕುಂದರ್, ಲೋಲಾಕ್ಷ ಶೆಟ್ಟಿ ಮೊಡಂಕಾಪು, ಶಕೀರ್ ಬಂಟ್ವಾಳ, ಲೋಕೇಶ್ ಪೂಜಾರಿ ಅಲೆತ್ತೂರು, ಕುಶಾಲ ಎಂ.ಮಂಜೋಟ್ಟಿ, ಬಾಲಕೃಷ್ಣ ಆಳ್ವ, ಮಂಜುಳಾ ಕುಶಲ ಪೆರಾಜೆ ಮತ್ತಿತರರು ಹಾಜರಿದ್ದರು.
ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಬರಲಿ, ಬರದೇ ಇರಲಿ. ಆದರೆ, ನಾವು ಮತೀಯವಾದಿ ಸಂಘಟನೆಗಳ ಜೊತೆ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಇದು ನಮ್ಮ ಸ್ಪಷ್ಟವಾದ ನಿಲುವು. ಆದರೆ, ಬಿಜೆಪಿ ಅಧಿಕಾರಕ್ಕಾಗಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿದೆ.
- ಬಿ.ರಮಾನಾಥ ರೈ, ಮಾಜಿ ಸಚಿವ