ಸಂವಿಧಾನವನ್ನೇ ಸುಡುವ ಮನುವಾದಿಗಳನ್ನು ಯಾವ ಬೆಲೆಕೊಟ್ಟಾದರೂ ಎದುರಿಸುತ್ತೇವೆ: ಚಂದು ಎಲ್
ಬೆಳ್ತಂಗಡಿಯಲ್ಲಿ ಮನುಸ್ಮೃತಿ ಸುಟ್ಟ ಪ್ರತಿಭಟನಕಾರರು
ಬೆಳ್ತಂಗಡಿ, ಆ. 27: ಸಂಘಪರಿವಾರದ ಕಾರ್ಯಕರ್ತರು ದೇಶದಲ್ಲಿ ದಲಿತರ, ಅಲ್ಪಸಂಖ್ಯಾತರ ಹಾಗೂ ಶೋಷಿತರ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ. ಸಂವಿಧಾನವನ್ನೇ ಬುಡಮೇಲು ಮಾಡುವ ಮೂಲಕ ದೇಶದಲ್ಲಿರುವ ಎಲ್ಲ ರೀತಿಯ ಸ್ವಾತಂತ್ರ್ಯಗಳನ್ನೂ ಕಸಿದುಕೊಳ್ಳುವ ಪ್ರಯತ್ನದ ಭಾಗವಾಗಿ ಸಂವಿಧಾನವನ್ನೇ ಸುಡುವ ಕಾರ್ಯಕ್ಕೆ ಮನುವಾದಿಗಳು ಇಳಿದಿದ್ದಾರೆ. ಇಂತಹ ಪ್ರಯತ್ನಗಳನ್ನು ಯಾವ ಬೆಲೆಕೊಟ್ಟಾದರೂ ಎದುರಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಚಾಲಕ ಚಂದು ಎಲ್ ಹೇಳಿದರು.
ಅವರು ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ಸೋಮವಾರ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಸಂವಿಧಾನವನ್ನು ಸುಟ್ಟ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 'ಸಂವಿಧಾನ ವಿರೋಧಿಗಳೇ ಭಾರತ ಬಿಟ್ಟು ತೊಲಗಿ' ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನ ಈ ದೇಶಕ್ಕೆ ಪವಿತ್ರವಾದ ಗ್ರಂಥ ಅದನ್ನು ಸುಟ್ಟವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಉದ್ಘಾಟನೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಅಧ್ಯಕ್ಷ ಬಿ.ಕೆ. ವಸಂತ ಅವರು ನೆರವೇರಿಸಿ ಮಾತನಾಡುತ್ತಾ ದೇಶದಲ್ಲಿ ಸಂಘ ಪರಿವಾರದ ವಿರುದ್ಧ ಮಾತನಾಡುವವರನ್ನು ಹತ್ಯೆ ಮಾಡುವ ಮೂಲಕವಾಗಿ ವಿರೋಧಗಳನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಲಾಗು ತ್ತಿದೆ. ಈ ನಾಡಿನ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಅವಕಾಶಗಳನ್ನು ಕಸಿದುಕೊಳ್ಳುವುದೇ ಸಂಘ ಪರಿವಾರದ ಉದ್ದೇಶವಾಗಿದ್ದು ಈ ಸಂಚನ್ನು ಅರಿತು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಶೋಷಿತ ಸಮುದಾಯಗಳು ಒಟ್ಟಾಗಿ ಇದನ್ನು ಎದುರಿಸಿ ನಿಲ್ಲಬೇಕಾಗಿದೆ ಎಂದರು. ದೇಶ ಪ್ರೇಮಿಗಳು ಎಂದಿಗೂ ಈ ದೇಶದ ಸಂವಿಧಾನವನ್ನು ಗೌರವಿಸುತ್ತಾರೆ. ಸಂವಿಧಾನವನ್ನು ಸುಟ್ಟವರು ದೇಶದ್ರೋಹಿಗಳು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಸಂವಿಧಾನಕ್ಕೆ ಬದ್ಧರಾಗಿ ಆಡಳಿತ ನಡೆಸುವುದಾಗಿ ಪ್ರಮಾಣವಚನ ತೆಗೆದುಕೊಂಡು ಅಧಿಕಾರ ವಹಿಸಿಕೊಂಡ ಸಚಿವರುಗಳು, ಮುಖ್ಯ ಮಂತ್ರಿಗಳು ಇಂದು ಸಂವಿಧಾನವನ್ನೇ ಬದಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ದೇಶದ ಮೇಲೆ ಮತ್ತೆ ವರ್ಣ ವ್ಯವಸ್ಥೆಯನ್ನು ಹೇರುವ ಪ್ರಯತ್ನವಾಗಿದೆ ಎಂದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಶೇಖರ ಕುಕ್ಕೇಡಿ, ವೆಂಕಣ್ಣ ಕೊಯ್ಯೂರು, ಶೇಖರ ಎಲ್, ವಸಂತ ನಡ, ಜಯರಾಮ ಮಯ್ಯ, ನೇಮಿರಾಜ್, ನಾಗರಾಜ ಲಾಯಿಲ, ಶ್ರೀಧರ ಕಳೆಂಜ, ಅಣ್ಣು ಸಾಧನ, ಕೂಸ ಅಳದಂಗಡಿ, ಸತೀಶ್ ಅಳದಂಗಡಿ, ನೀಲಮ್ಮ ಪುದುವೆಟ್ಟು, ಶಂಕರ ಮಾಲಾಡಿ, ಜನಾರ್ಧನ ಬಂಗೇರ, ಆನಂದ ನೆಲ್ಲಿಂಗೇರಿ, ಸುಮಾ ನಿಡ್ಲೆ, ಪ್ರವೀಣ್ ಗೌಡ, ಓಬಯ್ಯ ಆರಂಬೋಡಿ, ಅನಿಲ್ ಪೈ, ಪ್ರಭಾಕರ ಶಾಂತಿಕೋಡಿ, ನೆಬಿಸ ಹಾಗೂ ಇತರರು ನೇತೃತ್ವ ವಹಿಸಿದ್ದರು.
ಪ್ರತಿಭಟನಕಾರರು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಮೆರವಣಿಗೆಯಲ್ಲಿ ಮಿನಿವಿಧಾನಸೌಧಕ್ಕೆ ಆಗಮಿಸಿದರು. ಮೆರವಣಿಗೆಯುದ್ದಕ್ಕೂ ಸಂಘಪರಿವಾರದ ವಿರುದ್ಧ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಘೋಷಣೆಗಳು ಮೊಳಗಿದರು.
ಮನುಸ್ಮತಿ ಸುಟ್ಟ ಪ್ರತಿಭಟನಾಕಾರರು
ಪ್ರತಿಭಟನೆಯ ಉದ್ಘಾಟನೆಯ ವೇಳೆ ಉದ್ಘಾಟಕರಾದ ಬಿಕೆ ವಸಂತ ಹಾಗೂ ಪ್ರತಿಭಟನಾಕಾರರು ಮನುಸ್ಮತಿಗೆ ಬೆಂಕಿಹಚ್ಚುವ ಮೂಲಕ ಪ್ರತಿಭಟನೆಯನ್ನು ಉದ್ಘಾಟಿಸಿದರು.
ಸಂವಿಧಾನ ಸುಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಂವಿಧಾನವನ್ನು ಸುಟ್ಟು ಮನುಸ್ಮತಿ ಆಧಾರಿತ ಆಡಳಿತವನ್ನು ತರಲು ಸಂಘಪರಿವಾರ ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಸಂತ ಬಂಗೇರ ಭೇಟಿ
ಮಾಜಿ ಶಾಸಕ ಕೆ ವಸಂತ ಬಂಗೇರ ಅವರು ಪ್ರತಿಭಟನೆ ನಡೆಯುತ್ತಿದ್ದಲ್ಲಿಗೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಮಾತನಾಡಿ ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾದುದು ಅದನ್ನು ಬದಲಿಸಲು ಸಂಘಪರಿವಾರ, ಬಿಜೆಪಿ ಹೀಗೆ ಯಾರು ಕೈ ಹಾಕಿದರೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.