ತೊಕ್ಕೊಟ್ಟು: ಪತ್ನಿಯ ಅಣ್ಣನಿಂದ ಮಾರಣಾಂತಿಕ ಹಲ್ಲೆ ಪ್ರಕರಣ; ವ್ಯಕ್ತಿ ಮೃತ್ಯು
ಉಳ್ಳಾಲ, ಆ. 27: ಪತ್ನಿಯ ಅಣ್ಣನಿಂದಲೇ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ತೊಕ್ಕೊಟ್ಟು ಕಾಪಿಕಾಡು ಮಹಾಕಾಳಿ ದೈವಸ್ಥಾನದ ಬಳಿಯ ನಿವಾಸಿ ಜೋಸೆಫ್ (65) ಮೃತರು ಎಂದು ಗುರುತಿಸಲಾಗಿದೆ.
ಜೋಸೆಫ್ ಅವರ ಪತ್ನಿಯ ಅಣ್ಣ ಡೆನ್ನಿಸ್ (78) ಅವಿವಾಹಿತರಾಗಿದ್ದು, ತಂಗಿ ಜಾನೆಟ್ ಅವರಿಗೆ ಕಾಪಿಕಾಡುವಿನಲ್ಲಿ ಮನೆ ನಿರ್ಮಿಸಿಕೊಟ್ಟು ಅವರೊಂದಿಗೆ ವಾಸವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಂಗಿ ಮತ್ತು ಬಾವ ನನ್ನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬುವ ವಿಚಾರದಲ್ಲಿ ಡೆನ್ನಿಸ್ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಆ. 12ರಂದು ಮಧ್ಯಾಹ್ನ ಜೋಸೆಫ್ ರಿಗೆ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಂತರ ಉಳ್ಳಾಲ ಪೊಲೀಸ್ ಠಾಣೆಗೆ ಶರಣಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳು ದಂಪತಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜೋಸೆಫ್ ಬಲವಾದ ಹೊಡೆತದಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದು, ಎರಡು ವಾರಗಳ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ. ಡೆನ್ನಿಸ್ ಕೊಲೆಯತ್ನ ಆರೋಪದಡಿ ಈಗಾಗಲೇ ಜೈಲು ಸೇರಿದ್ದಾರೆ.