ಉದ್ಯಾವರ: ಬಕ್ರೀದ್ ಸೌಹಾರ್ದ ಕೂಟ
ಉಡುಪಿ, ಆ.27: ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಸೌಹಾರ್ದ ಸಮಿತಿಯ ವತಿಯಿಂದ ಬಕ್ರೀದ್ ಸೌಹಾರ್ದ ಕೂಟವನ್ನು ಚರ್ಚ್ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಉಡುಪಿಯ ಅಪರ ಜಿಲ್ಲಾ ಸರಕಾರಿ ವಕೀಲ ಮುಹಮ್ಮದ್ ಸುಹಾನ್ ಮಾತನಾಡಿ, ಇಂದು ಜಗತ್ತಿನಲ್ಲಿ ಸೌಹಾರ್ದತೆ ಅಲುಗಾಡುತ್ತಿದೆ. ಸೋಷಿಯಲ್ ಮಾಧ್ಯಮದ ಮೂಲಕ ನಾವು ಹಾಕುವಂತಹ ಕಮೆಂಟ್ಗಳು ಕೆಲವೊಮ್ಮೆ ಸೌಹಾರ್ದತೆಗೆ ಧಕ್ಕೆ ತರುತ್ತದೆ. ಜಗತ್ತಿನ ಯಾವುದೇ ದೇಶಗಳನ್ನು ನಾವು ನೋಡಿದಾಗ ಅಲ್ಲಿ ಕೇವಲ ಒಂದು ಅಥವಾ ಎರಡು ಭಾಷೆಗಳು, ಮತ್ತು ಒಂದು ಅಥವಾ ಎರಡು ಜಾತಿ ಧರ್ಮಗಳು ಮಾತ್ರ ಇರುತ್ತವೆ. ಆದರೆ ಸರ್ವ ಜನಾಂಗಗಳ ಶಾಂತಿಯ ತೋಟವಿದ್ದರೆ ಅದು ಭಾರತ ಮಾತ್ರ ಎಂದರು.
ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ಚಚ್ನ ಪ್ರಧಾನ ಧರ್ಮಗುರು ಮತ್ತು ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಕುಲಪತಿ ವಂ.ಫಾ.ಸ್ಟ್ಯಾನಿ ಬಿ.ಲೋಬೊ ಮಾತನಾಡಿ, ಭಾರತ ನಮ್ಮ ದೇಶ. ವೈವಿಧ್ಯತೆ ಮತ್ತು ಏಕತೆಯೇ ಭಾರತದ ಸಂಗಮ. ಹಲವು ರಾಜ್ಯಗಳು, ಆದರೆ ದೇಶವೊಂದೇ. ಹಲವು ಸಂಸ್ಕೃತಿಗಳು ಆಚರಣೆಗಳು, ಆದರೆ ಭಾವೈಕ್ಯತೆ ಒಂದೇ. ಹಬ್ಬದ ಮೂಲ ಕಾರಣ ಸೌಹಾರ್ದತೆ ಆಗಿರಬೇಕು ಎಂದು ತಿಳಿಸಿದರು.
ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ್ ಜಿ.ಎಸ್., ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉದ್ಯಾವರ ಹಲಿಮಾ ಸಾಬ್ಜು ಅಡಿಟೋರಿಯಂನ ನಿರ್ದೇಶಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಉದ್ಯಾವರ ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೇಡ್ ಡಿಸೋಜ ವಹಿಸಿದ್ದರು.
ಆಬಿದ್ ಅಲಿ ಸ್ವಾಗತಿಸಿದರು. ಪ್ರತಾಪ್ ಕುಮಾರ್ ಉದ್ಯಾವರ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.