ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ: ಆಡಳಿತ ಸಮಿತಿಯ ಅಧ್ಯಕ್ಷರಾಗಿ ಅಬೂಬಕರ್ ಹಾಜಿ ಗೋಳ್ತಮಜಲು ಆಯ್ಕೆ
ಬಂಟ್ವಾಳ, ಆ. 27: ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಅಬೂಬಕರ್ ಹಾಜಿ ಗೋಳ್ತಮಜಲು ಆಯ್ಕೆಯಾಗಿದ್ದಾರೆ.
ಸೋಮವಾರ ಸಂಜೆ ಮಸೀದಿಯಲ್ಲಿ ನಡೆದ ಚುನಾಯಿತ ಆಡಳಿತ ಸಮಿತಿ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ಶಾಫಿ ಕರ್ನಾಟಕ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಹಾಜಿ ಗೋಲ್ಡನ್, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಅಮರ್ ಅವರು ಅವಿರೋಧವಾಗಿ ಆಯ್ಕೆಯಾದರು.
ರಾಜ್ಯ ವಕ್ಫ್ ಬೋರ್ಡ್ ಆದೇಶದಂತೆ ಆ.16 ರಂದು ಮಸೀದಿಯ ಆಡಳಿತ ಸಮಿತಿಯ 21ಮಂದಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಒಟ್ಟು 48 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಅಬೂಬಕರ್ ಹಾಜಿ ಬಣದ 21 ಮಂದಿ ಹಾಗು ಇನ್ನೊಂದು ಬಣದ ಓರ್ವ ಸದಸ್ಯ ಆಯ್ಕೆಯಾಗಿದ್ದರು.
ರಾಜ್ಯ ವಕ್ಫ್ ಬೋರ್ಡ್ ನಿಂದ ಉಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಹಾಜಿ ವಿ. ಮುಹಮ್ಮದ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭ ಕಲ್ಲಡ್ಕ ಮಸೀದಿಯ ಖತೀಬ್ ಇಸ್ಮಾಯಿಲ್ ಫೈಝಿ ಉಪಸ್ಥಿತರಿದ್ದರು.